ಎಚ್.ಡಿ.ಕೋಟೆ: ನಾಡಿಗೆ ಬಾರದಂತೆ ಕಾವಲು ಕಾಯುತ್ತಿದ್ದ ಅರಣ್ಯ ಇಲಾಖೆ ವಾಚರ್ ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಕಳೆದ ಡಿ.31ರ ಶನಿವಾರ ರಾತ್ರಿ ಮೇಟಿಕುಪ್ಪೆ ವನ್ಯಜೀವಿ ವಲಯದ ದಟ್ಟಹಳ್ಳ ಗೇಟ್ ಬಳಿ ನಡೆದಿದೆ.
ತಾಲೂಕಿನ ಭೀಮನಕೊಲ್ಲಿ ಗ್ರಾಮ ಸಮೀಪದ ಸೋಮದೇವರಮುಂಟಿ ಗ್ರಾಮದ ನಿವಾಸಿ ಮಹದೇವಸ್ವಾಮಿ(43) ಮೃತ ದುರ್ದೈವಿ.ಇವರು ಪತ್ನಿ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.
ಇತ್ತೀಚಿಗೆ ಕಾಡಿನಿಂದ ಟ್ರಂಚ್ ದಾಟಿ ನಾಡಿಗೆ ಬರುವ ಕಾಡಾನೆಗಳು ಕಾಡಂಚಿನ ಗ್ರಾಮಗಳಲ್ಲಿ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದಿರುವ ಬೆಳೆಗಳನ್ನು ತಿಂದು ತುಳಿದು ಹಾಳುಮಾಡಿ ನಷ್ಟ ಮಾಡುತ್ತಿರುವುದನ್ನು ತಪ್ಪಿಸುವ ಸಲುವಾಗಿ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ರಾತ್ರಿ ಪಾಳಿಯ ಕಾವಲು ಹೆಚ್ಚಿಸಲಾಗಿದ್ದು, ಅದರಂತೆ ಕಳೆದ ರಾತ್ರಿ ಮೃತ ಮಹದೇವಸ್ವಾಮಿ ಸೇರಿದಂತೆ ಮೂವರು ವಾಚರ್ ಗಳು ದಟ್ಟಹಳ್ಳ ಗೇಟ್ ಬಳಿ ಬೆಂಕಿ ಹಾಕಿಕೊಂಡು ಕಾವಲು ಕಾಯುತ್ತಿದ್ದಾಗ ಆನೆ ದಿಢೀರ್ ದಾಳಿ ಮಾಡಿದೆ. ಈ ವೇಳೆ ಮೂವರು ವಾಚರ್ ಶುಂಠಿ ಜಮೀನಿನಲ್ಲಿ ತಪ್ಪಿಸಿಕೊಂಡು ಓಡುವ ವೇಳೆ ಮಹದೇವಸ್ವಾಮಿ ಆಯತಪ್ಪಿ ಬಿದ್ದ ಕೂಡಲೇ ಆನೆ ದಾಳಿ ಮಾಡಿ ತುಳಿದು ಸಾಯಿಸಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ಮಹದೇವಸ್ವಾಮಿ ಕುಟುಂಬಕ್ಕೆ ಇಲಾಖೆ ಕಡೆಯಿಂದ ಸೂಕ್ತ ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿದ ನಂತರ ಮೃತದೇಹವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು. 5ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ವಿತರಿಸಲಾಯಿತು.
ಶಾಸಕ ಅನಿಲ್ ಚಿಕ್ಕಮಾದು, ನಾಗರಹೊಳೆ ಡಿಸಿಎಫ್ ಡಾ.ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ಕೆ.ಎನ್.ರಂಗಸ್ವಾಮಿ, ಆರ್ ಎಫ್ ಓ ಸಿದ್ದರಾಜು ಇನ್ನಿತರರು ಇದ್ದರು.