ರಾಮನಗರ: ವೈಕುಂಠ ಏಕಾದಶಿ ಅಂಗವಾಗಿ ಜಿಲ್ಲೆಯಾದ್ಯಂತ ವಿಷ್ಣು ಹಾಗೂ ಹನುಮನ ದೇಗುಲಗಳಲ್ಲಿ ವೈಕುಂಠ ದ್ವಾರ ಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ.
ನಗರದ ಕೆಂಪೇಗೌಡ ಸರ್ಕಲ್ನಲ್ಲಿರುವ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಾಲಯ, ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯ, ಕಾಯಿಸೊಪ್ಪಿನ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯ, ಎಂ.ಜಿ.ರಸ್ತೆಯಲ್ಲಿರುವ ಶ್ರೀಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯ, ವಿಜಯನಗರದಲ್ಲಿರುವ ಶ್ರೀ ಕಾಳಿಕಾಂಭ ದೇವಾಲಯ, ಕೈಲಾಂಚ ಹೋಬಳಿ ಮೊಟ್ಟದೊಡ್ಡಿ ಶ್ರೀ ಶ್ರೀನಿವಾಸ ದೇವಾಲಯ.
ಬಿಡದಿಯ ಶ್ರೀ ಕೋದಂಡರಾಮ ದೇವಾಲಯ, ಮಂಚನಾಯ್ಕನಹಳ್ಳಿಯ ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯ. ಚನ್ನಪಟ್ಟಣದ ಅಪ್ರಮೇಯಸ್ವಾಮಿ ದೇವಾಲಯ, ಕೆಂಗಲ್ನ ಆಂಜನೇಯಸ್ವಾಮಿ ದೇವಾಲಯ, ದೇವರಹೊಸಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಮಾಗಡಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯ, ಕನಕಪುರದ ಕಲ್ಲಹಳ್ಳಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳು ವಿಜೃಂಭಣೆಯ ವೈಕುಂಠ ಏಕಾದಶಿಗೆ ಸಜ್ಜಾಗಿವೆ.
ಬಿಡದಿಯ ಪ್ರಸಿದ್ಧ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಜ.2ರ ಸೋಮವಾರದಂದು ವಿಶೇಷ ಪೂಜಾ-ಕೈಂಕರ್ಯಗಳು ನಡೆಯಲಿವೆ. ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸುವುದು ಹಾಗೂ ದೇವಾಲಯವನ್ನು ನಾನಾ ಪುಷ್ಪಗಳ ಅಲಂಕಾರದ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ. ಪ್ರತಿ ವರ್ಷವೂ ವಿಭಿನ್ನ ಹಾಗೂ ವೈಶಿಷ್ಟ್ಯಗಳಿಂದ ಆಚರಣೆ ಮಾಡಲಾಗುವ ವೈಕುಂಠ ಏಕಾದಶಿಯನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದುಬರಲಿದೆ.
ಏಕಾದಶಿ ಅಂಗವಾಗಿ ದೇವಾಲಯದಲ್ಲಿ ಕೋದಂಡರಾಮಸ್ವಾಮಿ ಮೂರ್ತಿಯನ್ನು ತಿರುಪತಿ ತಿಮ್ಮಪ್ಪನ ಮಾದರಿಯಲ್ಲಿ ವಿಶೇಷವಾಗಿ ಅಲಂಕರಿಸಲಾಗುತ್ತದೆ. ಅಲ್ಲದೆ ವೈಕುಂಠದ್ವಾರವನ್ನು ನಿರ್ಮಿಸಿ ಭಕ್ತರಿಗೆ ವಿಶೇಷ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ಸೋಮವಾರ ಬೆಳಗಿನ ಜಾವ ಸುಪ್ರಭಾತ ಸೇವಾ, ಕೋಲುವು ಆರಾಧನಾ ಸೇವಾ, ತೋಮಾಲಾ ಸೇವಾ, ಅಷ್ಟೋತ್ತರ ಶತ ನಾಮರ್ಚನಾ ಸೇವಾ, ನೈವೇದ್ಯ ನಂತರ ಸರ್ವ ದರ್ಶನಂ, ನಂತರ ಮಧ್ಯಾನಿಕ ಆರಾಧನಾ ಸರ್ವ ದರ್ಶನಂ ಪೂಜಾ ಕೈಂಕರ್ಯಗಳು ನೆರವೇರಲಿವೆ.
ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಗ್ರಾಮದಲ್ಲಿರುವ ಬ್ಯಾಟರಾಯಸ್ವಾಮಿ ದೇವಾಲಯ, ಹನುಮಂತನಗರದ ಕೋತಿ ಆಂಜನೇಯಸ್ವಾಮಿ ದೇಗುಲ, ಬಿಡದಿಯ ಬಾರೇದೊಡ್ಡಿಯ(ಛತ್ರ) ಬಾಲಾಂಜನೇಯಸ್ವಾಮಿ, ತಮ್ಮಣ್ಣನದೊಡ್ಡಿಯ ಮುತ್ತುರಾಯಸ್ವಾಮಿ ದೇಗುಲ, ಕದ್ರಿ ನರಸಿಂಹಸ್ವಾಮಿ ದೇವಾಲಯ, ಕೇತುಗಾನಹಳ್ಳಿ ಮತ್ತು ವಾಜರಹಳ್ಳಿಯ ಆಂಜನೇಯಸ್ವಾಮಿ ದೇವಾಲಯಗಳು ಸೇರಿದಂತೆ ನಾನಾ ಗ್ರಾಮಗಳಲ್ಲಿರುವ ಹನುಮನ ದೇಗುಲಗಳಲ್ಲಿ ವೈಕುಂಠ ಏಕಾದಶಿ ಆಚರಣೆಗೆ ಭರದ ಸಿದ್ಧತೆಗಳು ನಡೆದಿವೆ.