ಮೈಸೂರು: ನಗರದ ಹಿನಕಲ್ನಲ್ಲಿರುವ ವಾತ್ಸಲ್ಯ ಸೇವಾ ಫೌಂಡೇಶನ್, ಹಿರಿಯ ನಾಗರೀಕ ಸೇವಾ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಅಶೋಕಪುರಂ ಪೊಲೀಸ್ ಠಾಣೆಯ ನಿವೃತ್ತ ಸಬ್ ಇನ್ಸ್ಪೆಕ್ಟರ್ ಆರ್.ನಾಗರಾಜು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಜನ್ಮ ಕೊಟ್ಟ ತಂದೆ ತಾಯಿಗಳನ್ನು ಗೌರವಿಸುವುದು ಪ್ರತಿಯೊಬ್ಬ ಮಕ್ಕಳ ಆದ್ಯ ಕರ್ತವ್ಯ.
ಮಾತಾ ಪಿತೃಗಳೇ ದೇವರು. ಅವರು ಜನ್ಮ ನೀಡದಿದ್ದರೆ ನಾವು ಭೂಮಿ ಮೇಲೆ ಹುಟ್ಟುತ್ತಿರಲಿಲ್ಲ. ಜನ್ಮ ನೀಡಿದ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು. ವೃದ್ದಾಪ್ಯ ಜೀವನದಲ್ಲಿ ಅವರನ್ನು ಮನೆಯಲ್ಲಿಯೇ ಇಟ್ಟುಕೊಂಡು ಆರೈಕೆ ಮಾಡುವುದು ಬಹಳ ಮುಖ್ಯ. ಅವರನ್ನು ಸಂತೋಷದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಸ್ವಾರ್ಥ ಮನೋಭಾವ ಜಾಸ್ತಿಯಾಗಿ ತಂದೆ ತಾಯಿಗಳನ್ನು ಹಾಗೂ ಹಿರಿಯರನ್ನು ವೃದ್ಧಾಶ್ರಮಗಳಿಗೆ ತಳ್ಳುತ್ತಿರುವುದು ವಿಷಾದದ ಸಂಗತಿ. ಈ ಸಂಸ್ಕೃತಿ ನಿಲ್ಲಬೇಕು. ಎಲ್ಲರೂ ಒಟ್ಟಾಗಿ ಸೇವಾ ಮನೋಭಾವದಿಂದ ಸ್ವಕುಟುಂಬ ಪರಿವಾರವಾಗಿ ಬದುಕಬೇಕೆಂದು ತಿಳಿಸಿದರು.
ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ, ಮಾತನಾಡಿ, ಆರೋಗ್ಯವೇ ಮಹಾಭಾಗ್ಯ. ಇಂದು ರಾಸಾಯನಿಕಯುಕ್ತ ಆಹಾರಗಳನ್ನು ಸೇವಿಸಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದು ನಿಲ್ಲಬೇಕು. ವಿಷಪೂರಿತವಲ್ಲದ, ಸಹಜ ಕೃಷಿಯಿಂದ ತಯಾರಿಸಿದ ಸಾವಯಕ ಆಹಾರ ಪದಾರ್ಥಗಳನ್ನು ಉಪಯೋಗಿಸಬೇಕು. ಜಂಕ್ ಫುಡ್ (ಪೌಷ್ಠಿಕರಹಿತ ಆಹಾರ) ತಿನ್ನುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾತ್ಸಲ್ಯ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎ.ಸಿ.ರವಿಕುಮಾರ್ ಹಿರಿಯ ಜೀವಿಗಳಿಗೆ ಉಚಿತ ಔಷಧಿ ಸಲಕರಣೆಗಳನ್ನು ವಿತರಿಸಿದರು. ವಕೀಲ ಸತೀಶ್, ಸಮಾಜ ಸೇವಕ ಸಚಿನ್ ದೀಕ್ಷಿತ್ ಹಾಗೂ ವಾತ್ಸಲ್ಯ ಸೇವಾ ಪೌಂಡೇಶನ್ ಹಿರಿಯ ಜೀವಿಗಳು ಭಾಗವಹಿಸಿದ್ದರು. 63ಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.