ಚಾಮರಾಜನಗರ:ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾರ್ಚ್ 28ರಂದು ಮತ್ತು ಬಿಳಿಗಿರಿರಂಗಬೆಟ್ಟದಲ್ಲಿ ಏಪ್ರಿಲ್ 16ರಂದು ರಥೋತ್ಸವ ನಡೆಯಲಿದ್ದು, ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿ, ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಪ್ರಭಾರ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ಸಭೆ ನಡೆಸಿದ ಅವರು, ರಥೋತ್ಸವದ ವೇಳೆ ಪ್ರಮುಖವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದ್ದು, ಪ್ರಸ್ತುತ ಇರುವ ಸೌಲಭ್ಯಗಳೊಂದಿಗೆ ಇನ್ನು ಎಷ್ಟು ಟ್ಯಾಂಕರ್ಗಳ ಅವಶ್ಯಕತೆಯಿದೆ, ಶೌಚಾಲಯಗಳ ಬಳಕೆಗೆ ಯಾವ ಕ್ರಮಗಳು ತೆಗೆದುಕೊಳ್ಳಬೇಕಿದೆ ಎಂಬ ಬಗ್ಗೆ ಪರಿಶೀಲಿಸಬೇಕು. ಪೈಪ್ಲೈನ್ಗಳು, ಕೊಳವೆಬಾವಿಗಳು ಸುಸ್ಥಿತಿಯಲ್ಲಿವೆಯೇ ಎಂಬ ಬಗ್ಗೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಹೇಳಿದ್ದಾರೆ.
ಈ ಬಾರಿ ರಥೋತ್ಸವಕ್ಕೆ ಹೆಚ್ಚು ಜನ ಆಗಮಿಸುವ ಸಾಧ್ಯತೆ ಇರುವುದರಿಂದ ಸ್ವಚ್ಚತೆಗೂ ವಿಶೇಷ ಗಮನಹರಿಸಬೇಕು. ಸ್ವಚ್ಚತಾ ಸಿಬ್ಬಂದಿಯನ್ನು ಅಗತ್ಯಕ್ಕೆ ಅನುಗುಣವಾಗಿ ನಿಯೋಜಿಸಬೇಕು. ವೈದ್ಯರ ತಂಡವು ಸಿಬ್ಬಂದಿಯೊಂದಿಗೆ ಸ್ಥಳದಲ್ಲಿಯೇ ಇದ್ದು ಚಿಕಿತ್ಸಾ ಕ್ರಮಗಳಿಗೆ ಮುಂದಾಗಬೇಕು. ಸುರಕ್ಷತೆ ದೃಷ್ಠಿಯಿಂದ ಅಗ್ನಿಶಾಮಕ ಸಿಬ್ಬಂದಿಯ ನಿಯೋಜನೆಯೂ ಆಗಬೇಕೆಂದು ತಿಳಿಸಿದ್ದಾರೆ.
ಬಸ್ಸುಗಳ ಸೌಕರ್ಯ, ಸುಗಮ ಸಂಚಾರ ವ್ಯವಸ್ಥೆ, ರಸ್ತೆಗಳಲ್ಲಿ ಗುಂಡಿಗಳಿದ್ದಲ್ಲಿ ಮುಚ್ಚುವ ಕಾರ್ಯ, ನಿರಂತರ ವಿದ್ಯುತ್ ಸೌಲಭ್ಯ ಸೇರಿದಂತೆ ಇತರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಥೋತ್ಸವ, ಜಾತ್ರೆಗೆ ಬೇಕಾದ ಸಿದ್ದತೆಗಳು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.