ಪಾಂಡವಪುರ: ತಾಲೂಕಿನ ಮೇಲುಕೋಟೆಯಿಂದ ಬೋಗಾದಿಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಲ್ಲಿ ಬಿಜೆಪಿ ಮುಖಂಡ, ಪರಿವರ್ತನ ಟ್ರಸ್ಟ್ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಸಫಲರಾಗಿದ್ದಾರೆ.
ಮೇಲುಕೋಟೆಯಿಂದ ಗೌರಿಕಟ್ಟೆ ವೃತ್ತ, ಕನಗೋನಹಳ್ಳಿ, ತಾಳೆಕೆರೆ ಮಾರ್ಗವಾಗಿ ನಾಗಮಂಗಲ ತಾಲೂಕಿನ ಬೋಗಾದಿಗೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಬಸ್ ವ್ಯವಸ್ಥೆಯಿಲ್ಲದೇ ಖಾಸಗಿ ವಾಹನಗಳ ಮೇಲೆ ಅವಲಂಭಿತರಾಗಿದ್ದರು.
ಜತೆಗೆ ಮೇಲುಕೋಟೆ ಧಾರ್ಮಿಕ ಕ್ಷೇತ್ರವಾಗಿರುವ ಕಾರಣಕ್ಕೆ ಈ ಮಾರ್ಗದಿಂದ ಮೇಲುಕೋಟೆಗೆ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಬಸ್ ಇಲ್ಲದೇ ನಿತ್ಯ ಅನುಭವಿಸುತ್ತಿದ್ದ ತೊಂದರೆಯನ್ನು ಪ್ರಯಾಣಿಕರು ಸರ್ಕಾರದ ಗಮನಕ್ಕೆ ತಂದು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಬಿಜೆಪಿ ಮುಖಂಡರಾದ ಡಾ.ಎನ್.ಎಸ್.ಇಂದ್ರೇಶ್ ಅವರ ಬಳಿ ಮನವಿ ಮಾಡಿಕೊಂಡಿದ್ದರು.
ಸ್ಥಳೀಯರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಅವರು ಬಸ್ ವ್ಯವಸ್ಥೆ ಕಲ್ಪಿಸುವವರೆಗೆ ತಾವು ಮೇಲುಕೋಟೆಗೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಕೊಟ್ಟ ಮಾತಿನಂತೆಯೇ ಕೆಎಸ್ಆರ್ಟಿಸಿ ನಿಗಮದ ಉಪಾಧ್ಯಕ್ಷ ಎಸ್.ಎನ್.ಈಶ್ವರಪ್ಪ ಅವರಿಗೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟು ಮೇಲುಕೋಟೆ ಭಾಗದ ಗ್ರಾಮೀಣ ಜನರಿಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ ಈ ಮಾರ್ಗವಾಗಿ ಕಳೆದ ಮೂರು ದಿನಗಳಿಂದಲೂ ಪ್ರತಿನಿತ್ಯ ಐದು ಬಾರಿ ಕೆಎಸ್ಆರ್ಟಿಸಿ ಬಸ್ ಸಂಚರಿಸುತ್ತಿದೆ. ಇದರಿಂದ ಈ ಭಾಗದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಅತೀವ ಸಂತಸ ವ್ಯಕ್ತಪಡಿಸುವ ಜತೆಗೆ ಡಾ.ಎನ್.ಎಸ್.ಇಂದ್ರೇಶ್ ಅವರ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.