ಪಾಂಡವಪುರ : ಜಿಲ್ಲೆಯ ಪಾಂಡವಪುರ ತಾಲೂಕಿನ ಪುರಾಣ ಪ್ರಸಿದ್ದ ಬೇಬಿ ಬೆಟ್ಟದ ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳ ಆಯ್ಕೆ ಭಾನುವಾರ ನಡೆದಿದ್ದು, ಸುಮಾರು 55 ರಾಸುಗಳನ್ನು ಬಹುಮಾನಕ್ಕ ಆಯ್ಕೆ ಮಾಡಲಾಯಿತು.
ಜಾತ್ರೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ರಾಸುಗಳು ಭಾಗವಹಿಸಿದ್ದು, ಈ ಪೈಕಿ ಎತ್ತುಗಳು, ಜೋಡಿ ಕಡಸುಗಳು ಹಾಗೂ ಬೀಜದ ಹೋರಿಗಳು ಸೇರಿದಂತೆ 15 ವಿಭಾಗಗಳಾಗಿ ವಿಂಗಡಿಸಿ ಆಯ್ಕೆ ನಡೆಸಲಾಯಿತು. ಹಾಲು ಹಲ್ಲಿನ, 2, 4, 6 ಹಲ್ಲು ಹಾಗೂ ಬಾಯಿಗೂಡಿದ ರಾಸುಗಳನ್ನು ಸೇರಿದಂತೆ 230 ಜೊತೆ ರಾಸುಗಳನ್ನು ಬಹುಮಾನಕ್ಕೆ ನೋಂದಣಿ ಮಾಡಲಾಗಿತ್ತು.
ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ತಳಿಗಳ ಗುಣ ಲಕ್ಷಣದ ಆಧಾರದ ಮೇಲೆ ವಿಭಾಗವಾರು ರಾಸುಗಳನ್ನು ಪಶು ವೈದ್ಯಾಧಿಕಾರಿಗಳ ತಂಡ ಯಾವುದೇ ಹಸ್ತಕ್ಷೇಪವಿಲ್ಲದೇ ಸಾರ್ವಜನಿಕರೆದುರು ಪಾರದರ್ಶಕವಾಗಿ ಆಯ್ಕೆ ಮಾಡಿದರು. ಆಯ್ಕೆಯಾದ ರಾಸುಗಳಿಗೆ ಮಾ.8 ರಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಬಹುಮಾನ ವಿತರಿಸಲಾಗುವುದು.
55 ವಿಜೇತ ರಾಸುಗಳಿಗೆ ತಲಾ 5 ಗ್ರಾಂನಂತೆ ಒಟ್ಟು 250 ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತದೆ ಎಂದು ಪಾಂಡವಪುರ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಬಿ.ಪ್ರವೀಣ್ಕುಮಾರ್ ತಿಳಿಸಿದ್ದಾರೆ.
ಪಾಂಡವಪುರ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಬಿ.ಪ್ರವೀಣ್ಕುಮಾರ್ ನೇತೃತ್ವದಲ್ಲಿ ಮೈಸೂರು, ಚಾಮರಾಜನಗರ ಸೇರಿದಂತೆ ಹೊರ ಜಿಲ್ಲೆಗಳಿಂದ ಡಾ.ರಾಘವೇಂದ್ರ, ಡಾ.ನಟರಾಜು, ಡಾ.ಶಶಿಧರ್, ಡಾ.ಹರೀಶ್, ಡಾ.ಮಧುಚಂದ್ರೇಗೌಡ ಅವರುಗಳ ನೇತೃತ್ವದಲ್ಲಿ ಎರಡು ತಂಡಗಳು ಆಯ್ಕೆ ಪ್ರಕ್ರಿಯೆ ನಡೆಸಿದರು.
ಸ್ಥಳೀಯ ಪಶು ವೈದ್ಯಾಧಿಕಾರಿಗಳಾದ ಡಾ.ಮಹೇಂದ್ರ, ಡಾ.ಹಿಮಚಲ, ಡಾ.ದರ್ಶನ್, ಡಾ.ಮಧು, ಪಶು ಪರೀಕ್ಷಕರಾದ ಕೆ.ಶಿವಲಿಂಗೇಗೌಡ, ಶ್ರೀನಿವಾಸ್, ಲೋಕೇಶ್, ಸಿಬ್ಬಂದಿಗಳಾದ ಸಣ್ಣೇಗೌಡ, ಸಚಿನ್, ಕುಮಾರ್, ಕದರೇಶ್ ಮತ್ತು ಶ್ರೀ ರಾಮಯೋಗಿಶ್ವರ ಮಠದ ಶಿವಬಸವ ಸ್ವಾಮೀಜಿ, ತಾ.ಪಂ ಇಒ ಆರ್.ಪಿ.ಮಹೇಶ್, ಜಾತ್ರಾ ಸಲಹಾ ಸಮಿತಿ ಅಧ್ಯಕ್ಷ ಶಿಂಡಬೋಗನಹಳ್ಳಿ ನಾಗಣ್ಣ ಇದ್ದರು.