ಮಹದೇಶ್ವರ ಬೆಟ್ಟ : ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಮಹೋತ್ಸವದ ಸಮಯದಲ್ಲಿ ಇದೇ 27ರಿಂದ ಮಾರ್ಚ್ 2ರವರೆಗೆ ಹನೂರು ತಾಲ್ಲೂಕಿನ ವಡಕೆಹಳ್ಳದ ಒಂದು, ಕೌದಳ್ಳಿಯಲ್ಲಿರುವ ಎರಡು ಮದ್ಯದ ಅಂಗಡಿ ಮುಚ್ಚಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದು, ಮದ್ಯ ಮಾರಾಟ, ಅಕ್ರಮ ಸಾಗಣೆ, ದಾಸ್ತಾನು ಮಾಡದಂತೆ ಸೂಚಿಸಿದ್ದಾರೆ.
ಮಹದೇಶ್ವರ ಬೆಟ್ಟದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈ ದಿನಗಳಂದು ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದೂ ಅವರು ಆದೇಶದಲ್ಲಿ ಹೇಳಿದ್ದಾರೆ.
ನಾಲ್ಕು ದಿನ ವಾಸ್ತವ್ಯ ಇಲ್ಲ: ಇದೇ 28ರಿಂದ ಮಾರ್ಚ್ 3ರವರೆಗೆ ಬೆಟ್ಟದಲ್ಲಿ ಮಹಾಶಿವರಾತ್ರಿಯ ವಿಶೇಷ ಪೂಜೆ ನಡೆಯಲಿವೆ. ದರ್ಶನ, ಪೂಜೆಗಳು, ಅಭಿಷೇಕ, ಚಿನ್ನದ ತೇರು, ಮಹಾ ರಥೋತ್ಸವ ಸೇವೆಗಳು ನಡೆಯಲಿವೆ.
ಕೋವಿಡ್ ಕಾರಣದಿಂದ ಶಿವರಾತ್ರಿ ಅಂಗವಾಗಿ ಸರಳವಾಗಿ ಧಾರ್ಮಿಕ ವಿಧಿ-ವಿಧಾನ ನಡೆಯುವುದರಿಂದ ಇದೇ 27ರಿಂದ ಮಾರ್ಚ್ 2ರವರೆಗೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭಕ್ತರು ರಾತ್ರಿ ತಂಗುವುದಕ್ಕೆ ನಿಷೇಧ ಹೇರಲಾಗಿದೆ.
ಪ್ರಾಧಿಕಾರದ ವಸತಿ ಗೃಹಗಳಲ್ಲಿ ಹಾಗೂ ಖಾಸಗಿ ವಸತಿ ಗೃಹಗಳಲ್ಲಿ ಯಾರೂ ತಂಗುವಂತಿಲ್ಲ. ಖಾಸಗಿ ವ್ಯಕ್ತಿಗಳು ಅತಿಥಿಗೃಹಗಳನ್ನು ನೀಡಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
‘ದೇವಾಲಯದಲ್ಲಿ ಬೆಳಿಗ್ಗೆ 4ರಿಂದ ರಾತ್ರಿ 10ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ನಂತರ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿದ್ದಾರೆ.
ಭಕ್ತರ ಪ್ರವೇಶ ನಿರ್ಬಂಧ
ಮಾರ್ಚ್ 2ರ ಮಧ್ಯಾಹ್ನ 3ರಿಂದ, 3ರ ಮಧ್ಯಾಹ್ನದವರೆಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
‘ಕೊಳ್ಳೇಗಾಲದಲ್ಲಿ, ಹನೂರಿನಲ್ಲಿ, ಕೌದಳ್ಳಿಯಲ್ಲಿ ಬೆಟ್ಟಕ್ಕೆ ಪ್ರವೇಶವಿಲ್ಲದಿರುವ ಬಗ್ಗೆ ಭಕ್ತಾದಿಗಳಿಗೆ ತಿಳಿವಳಿಕೆ ನೀಡಲಾಗುವುದು. ಮಹಾರಥ ವೇಳೆಯಲ್ಲಿ ಜನಸಂದಣಿ ತಡೆಗಟ್ಟಲು ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ’ ಎಂದು ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.
ದಾಸೋಹ ಮತ್ತು ವಿಶೇಷ ದಾಸೋಹಗಳ ವ್ಯವಸ್ಥೆ ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.