ಚಾಮರಾಜನಗರ: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಾಂಪುರ ಆನೆ ಶಿಬಿರದಲ್ಲಿರುವ ಎರಡು ಆನೆಗಳು ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ಬಂಡೀಪುರದಿಂದ ಗಜಪಯಣ ಆರಂಭವಾಗಲಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ವ್ಯಾಪ್ತಿಯ ರಾಂಪುರ ಆನೆ ಶಿಬಿರದ ಚೈತ್ರ ಹಾಗೂ ಲಕ್ಷ್ಮಿ ಸಾಕಾನೆಗಳು ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರತಿ ವರ್ಷ ನಾಗರಹೊಳೆ ವ್ಯಾಪ್ತಿಯ ವೀರನಹೊಸಹಳ್ಳಿಯಿಂದ ಗಜಪಯಣ ನಡೆಯುತ್ತದೆ. ಆದರೆ ಈ ಬಾರಿ ಆ ರೀತಿ ಇಲ್ಲ ಎನ್ನಲಾಗಿದ್ದು, ಬಂಡೀಪುರದ ಸಾಕಾನೆಗಳನ್ನು ಬಂಡೀಪುರ ವ್ಯಾಪ್ತಿಯ ಮದ್ದೂರು ವಲಯಾರಣ್ಯಾಧಿಕಾರಿಗಳ ಕಚೆೇರಿಗೆ ಕರೆದೊಯ್ದು ಅಲ್ಲಿಂದ ಗಜ ಪಯಣದ ಮೂಲಕ ಮೈಸೂರು ದಸರಾಕ್ಕೆ ಕರೆದೊಯ್ಯಲಾಗುತ್ತಿದೆ. ಈ ಕುರಿತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿ ಎಸ್.ಆರ್. ನಟೇಶ್ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 11 ರಂದು ಸಂಜೆ ನಾಲ್ಕು ಗಂಟೆಗೆ ಮದ್ದೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯ ಬಳಿಯಿಂದ ಸಾಕಾನೆಗಳಾದ ಚೈತ್ರ ಮತ್ತು ಲಕ್ಷ್ಮಿಗೆ ಅಲಂಕಾರ ಮಾಡಿ ಗಜ ಪಯಣಕ್ಕೆ ಚಾಲನೆ ನೀಡಲಾಗುವುದು. ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್, ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.