ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ನಿಲ್ಲಿಸಬಾರದು ಮತ್ತು ವನ್ಯ ಪ್ರಾಣಿಗಳಿಗೆ ಯಾವುದೇ ತಿನಿಸುಗಳನ್ನು ನೀಡಬಾರದು ಎಂಬ ನಿರ್ಬಂಧವಿದ್ದರೂ ಅದನ್ನು ಉಲ್ಲಂಘಿಸಿದ ದೆಹಲಿಯ ವರದಿಗಾರನಿಗೆ ದಂಡ ವಿಧಿಸಲಾಗಿದೆ.
ದೆಹಲಿಯ ವರದಿಗಾರ ವಾಖ್ಹರ್ ಅಹಮದ್ ಎಂಬಾತನೇ ಜಿಂಕೆಗೆ ರಾಷ್ಟ್ರೀಯ ಹೆದ್ದಾರಿ ನಡುವೆ ತಿಂಡಿ ತಿನಿಸಿ ದಂಡ ತೆತ್ತವನು. ಈತ ಬುಧವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಬಂಡೀಪುರ ದಿಂದ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಯ ಬಂಡೀಪುರ ವಲಯಕ್ಕೆ ಸೇರುವ ರಸ್ತೆಯಲ್ಲಿ ಜಿಂಕೆಗೆ ತಿಂಡಿ ತಿನಿಸಿದ್ದಾನೆ. ಇದೇ ವೇಳೆ ಟ್ಯಾಕ್ಸಿ ಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರೊಬ್ಬರು ಆ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ.
ಇದು ವೈರಲ್ ಆಗಿದ್ದು ಬಂಡೀಪುರ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿದೆ.
ಕೂಡಲೇ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ಜಿಂಕೆಗೆ ತಿಂಡಿ ತಿನಿಸಿದ ಕಾರು ಕೆಎ 3 ಎಜಿ 9602ನ್ನು ಬೆನ್ನತ್ತಿದ್ದು, ಕೊನೆಗೂ ಆತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದ ವೇಳೆ ಆತನ ಹೆಸರು ವಾಖ್ಹರ್ ಅಹಮದ್, ಎನ್ ಡಿ ಟಿವಿ ನವದೆಹಲಿಯ ವರದಿಗಾರ ಎಂಬುದು ತಿಳಿದು ಬಂದಿದ್ದು, ದಂಡ ಕಟ್ಟಿಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ. ಈ ವಿಚಾರವನ್ನು ಗುಂಡ್ಲುಪೇಟೆ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಅವರು ದೃಢಪಡಿಸಿದ್ದಾರೆ.