ಚಾಮರಾಜನಗರ: ಕಳೆದ ಮೂರು ವರ್ಷಗಳಿಂದ ನೀರು ಕಾಣದೆ ಒಣಗಿದ್ದ ಜಿಲ್ಲೆಯ ಬಹಳಷ್ಟು ಕೆರೆಗಳಲ್ಲಿ ಜೀವ ಜಲ ಸಂಗ್ರಹವಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಬರದಿಂದ ಜಿಲ್ಲೆಯ ಬಹಳಷ್ಟು ಕೆರೆಗಳು ಒಣಗಿದ್ದವು. ಇದರಿಂದ ಅಂತರ್ಜಲ ಕಡಿಮೆಯಾಗಿ ರೈತರು ಪರದಾಡುವಂತಾಗಿತ್ತು. ಜತೆಗೆ ಜಾನುವಾರುಗಳಿಗೆ ಮೇವಿಲ್ಲದೆ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
2017ರ ನಂತರ ಅಂದರೆ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆ ಸೇರಿದಂತೆ ಕಪಿಲ ನದಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಜತೆಗೆ ಸರ್ಕಾರ ಕೆರೆಗಳಿಗೆ ನದಿಗಳಿಂದ ನೀರು ತುಂಬಿಸುವ ಯೋಜನೆ ಜಾರಿಗೆ ತಂದು ನದಿಯಿಂದ ನೀರು ತುಂಬಿಸುವ ಕಾರ್ಯ ಆರಂಭಿಸಿರುವುದರಿAದ ಹಲವು ಕೆರೆಗಳಲ್ಲಿ ನೀರು ತುಂಬಿ ನಳನಳಿಸುತ್ತಿವೆ. ಇಲ್ಲಿನ ಬಹಳಷ್ಟು ಕೆರೆಗಳಿಗೆ ಕಪಿಲಾ ನದಿಯೇ ಜೀವಾಳವಾಗಿದ್ದು, ನದಿ ನೀರನ್ನು ಇದೀಗ ಕೆರೆಗಳಿಗೆ ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ.
ಕೇರಳದ ವಯನಾಡು ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಈ ನೀರನ್ನು ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಕೆರೆಗೆ ಹರಿಸಿದ ಪರಿಣಾಮ ಕೆರೆ ಸಂಪೂರ್ಣ ಭರ್ತಿಯಾಗಿದೆ. ಮೊದಲೆಲ್ಲ ನೀರಿಲ್ಲದೆ ಖಾಲಿ ಖಾಲಿಯಾಗಿ ಕಾಣುತ್ತಿದ್ದ ಕೆರೆಯು ಈಗ ನೀರು ತುಂಬಿ ಅಲೆಯಾಡುತ್ತಿರುವುದರಿಂದ ಜನ ಅದನ್ನು ನೋಡಿ ಖುಷಿ ಪಡುತ್ತಿದ್ದಾರೆ. ಜತೆಗೆ ನದಿಯಿಂದ ಹರಿದು ಬಂದ ನೀರು ಕೆರೆಗೆ ಜಲಪಾತದಂತೆ ಧುಮುಕುವ ದೃಶ್ಯ ಕಣ್ಮನ ಸೆಳೆಯುತ್ತಿದೆ.
ಹೆಚ್.ಡಿ.ಕೋಟೆಯಿಂದ ನಂಜನಗೂಡು ಮೂಲಕ ಹರಿದು ಬರುವ ಕಪಿಲಾ ನದಿಯಿಂದ ಸುತ್ತೂರು ಬಳಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಕಾವೇರಿ ನೀರಾವರಿ ನಿಗಮ ಮಾಡುತ್ತಿದ್ದು, ಸದ್ಯ ಚಾಮರಾಜನಗರ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರು ಕಾಣುತ್ತಿದೆ. ಈ ನಡುವೆ ಬೆಂಡರವಾಡಿ ಕೆರೆ ತುಂಬಿದ್ದು ನಂತರ ಕೆರಹಳ್ಳಿ ಕೆರೆಯನ್ನು ತುಂಬಿಸಲಾಗಿದೆ. ಈಗ ತಮ್ಮಡಹಳ್ಳಿ ಕೆರೆಯೂ ಭರ್ತಿಯಾಗಿದ್ದು, ನಂಜೇದೇವನಪುರ ಕೆರೆಯನ್ನು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ಸದ್ಯ ಜಿಲ್ಲೆಗೊಂದು ಸುತ್ತು ಹೊಡೆದರೆ ತುಂಬಿದ ಕೆರೆಗಳು ಕಂಡು ಬರುತ್ತಿರುವುದು ಖುಷಿಯ ವಿಚಾರವಾಗಿದೆ.