ಚಾಮರಾಜನಗರ: ಸಿಬ್ಬಂದಿಗಳ ಕೊರತೆಯಿಂದಾಗಿ ಹನೂರು ಅಭಿವೃದ್ಧಿಯಿಂದ ವಂಚಿತವಾಗಿದೆ. ತಾಲೂಕು ಕೇಂದ್ರವಾದ ಹನೂರಿನಲ್ಲಿ ಸ್ವಚ್ಛತೆಯ ಕೊರತೆ ಎದ್ದುಕಾಣುತ್ತಿದೆ. ಕರೋನಾದಂತಹ ಸಮಯದಲ್ಲಿ ಅಶುಚಿತ್ವ ತಾಂಡವ ಆಡುತ್ತಿರುವುದು ಜನರ ಆರೋಗ್ಯಕ್ಕೂ ಸಂಚಕಾರ ಬಂದಿದೆ.
ಪಂಚಾಯಿತಿ ಕಚೇರಿಗೆ 40 ಜನ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವ ಸಾಮರ್ಥ್ಯವಿದ್ದರೂ, ಸದ್ಯ ಕೇವಲ ಮೂರು ಜನ ಸಿಬ್ಬಂದಿ ಹಾಗೂ 11 ಪೌರ ಕಾÀರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ, ಅಲ್ಲದೇ ಕಂದಾಯ ಅಧಿಕಾರಿ, ಆರೋಗ್ಯ ಅಧಿಕಾರಿ, ಸಿವಿಲ್ ಇಂಜಿನಿಯರ್ ನೇಮಕ ಮಾಡದಿರುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದ ಬೇಸತ್ತ ಸಾರ್ವಜನಿಕರು ಮಂಗಳವಾರ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಪಂಚಾಯಿತಿ ಅಧಿಕಾರಿ ಪಿ.ಮೂರ್ತಿ ಸಿಬಂಧಿಯ ಕೊರತೆಯಿಂದಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮೇಲಿನ ಒತ್ತಡ ಹೆಚ್ಚಾಗಿದೆ. ಇದಲ್ಲದೇ ಸಾಕಷ್ಟು ಸಿಬ್ಬಂದಿಗಳು ಇಲ್ಲದ ಕಾರಣ ಪಂಚಾಯಿತಿಗೆ ಸೇರಬೇಕಾದ ತೆರಿಗೆ ಹಣ ಇನ್ನು ಸಂಗ್ರಹವಾಗಿಲ್ಲ. ಕೇವಲ ಬಾಡಿಗೆಯ ಮೊತ್ತ ಸುಮಾರು 95 ಲಕ್ಷ ರೂಪಾಯಿ ಬಾಕಿ ಉಳಿದಿದೆ ಎಂದು ಹೇಳಿದರು. ಹೊಸದಾಗಿ ಪ್ರಾರಂಭವಾದ ಕಟ್ಟಡಗಳಿಂದ ಬರಬೇಕಾದ ಬಾಡಿಗೆ ಸುಮಾರು 85 ಲಕ್ಷ ರೂಪಾಯಿಯಷ್ಟಿದೆ. ಈಗ ಲಭ್ಯವಿರುವ ಅಂಕಿ ಅಂಶದ ಪ್ರಕಾರ 1500 ಅಕ್ರಮ ನೀರಿನ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. ಆದರೆ ಸಿಬ್ಬಂದಿಗಳು ಇಲ್ಲದ ಕಾರಣ ಸರಿಯಾದ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ.
ಪಂಚಾಯಿತಿ ಅಧಿನಿಯಮದ ಪ್ರಕಾರ ಒಂದು ಪಂಚಾಯತಿ ಕಚೇರಿಗೆ ಕನಿಷ್ಠ 25 ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು, ಆದರೆ ಇಲ್ಲಿ ಕೇವಲ 11 ಪೌರ ಕಾರ್ಮಿಕರು ಇರುವುದರಿಂದ ಸ್ವಚ್ಛತೆ ಕಾರ್ಯ ಸರಿಯಾಗಿ ಆಗುತ್ತಿಲ್ಲ. ಹನೂರಿನ ಜನಸಂಖ್ಯೆ ಸುಮಾರು 18.000 ಸಾವಿರದಷ್ಟಿದೆ. ಕೇವಲ ಆಸ್ತಿ ತೆರಿಗೆ 44.14 ಲಕ್ಷ ರೂಪಾಯಿ ಸಂಗ್ರಹವಾಗಬೇಕು ಆದರೆ ಇಲ್ಲಿಯವರೆಗೂ ಕೇವಲ 20.45 ಲಕ್ಷ ರೂಪಾಯಿ ಬಾಕಿ ಉಳಿದಿದೆ. ನೀರಿನ ಬಿಲ್ 22 ಲಕ್ಷದಲ್ಲಿ ಸುಮಾರು 1.7 ಲಕ್ಷ ರೂಪಾಯಿ ಮಾತ್ರ ಸಂಗ್ರಹವಾಗಿದೆ. ಇಷ್ಟೆಲ್ಲಾ ಸಮಸ್ಯೆ ಆಗಿದ್ದರೂ ಸರ್ಕಾರ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಂದಾಗಿಲ್ಲ ಎಂದು ಪಂಚಯಿತಿ ಅಧಿಕಾರಿ ತಿಳಿಸಿದರು.