ಚಾಮರಾಜನಗರ: ಜಿಲ್ಲೆಯಲ್ಲಿ ಇದೀಗ ಪ್ರವಾಸಿಗರ ಸೆಲ್ಫೀ ಕ್ರೇಜ್ ನಿಂದ ಸೂರ್ಯ ಕಾಂತಿ ಬೆಳೆ ಬೆಳೆಯುವ ರೈತರ ಮೊಗದಲ್ಲಿ ಮಂದಹಾಸ ಮಿನುಗುತ್ತಿದೆ.
ಕೊರೊನಾ ಭೀತಿ ನಡುವೆಯೂ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿಗೆ ಬರುತ್ತಿರುವ ಪ್ರವಾಸಿಗರ ದಂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೂರ್ಯಕಾಂತಿ ಜಮೀನುಗಳಿಗೆ ನುಗ್ಗಿ ಫೋಟೋ ಕ್ಲಿಕಿಸುತ್ತಿದ್ದಾರೆ. ಸೂರ್ಯಕಾಂತಿ ಫಸಲು ನಳನಳಿಸುತ್ತಿದ್ದು, ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ನೂರಾರು ಪ್ರವಾಸಿಗರು ಜಮೀನಿನಲ್ಲಿ 2-3 ತಾಸು ಸಮಯ ಕಳೆದು, ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.
ಪ್ರವಾಸಿಗರ ಸೆಲ್ಫಿ ಸಂಭ್ರಮಕ್ಕೆ ಜಮೀನು ಮಾಲೀಕ ಅಭಿಷೇಕ್ ಗಿಡಗಳನ್ನು ತುಳಿದು ಹಾಳು ಮಾಡಬೇಡಿ, ಹೂವುಗಳನ್ನು ಕೀಳಬೇಡಿ ಎನ್ನುತ್ತಿದ್ದಾರೆ. ಅಲ್ಲದೆ ಪ್ರವಾಸಿಗರ ಬಳಿ 50 ರೂ. ಶುಲ್ಕ ಪಡೆಯುತ್ತಿದ್ದಾರೆ.
ಸೂರ್ಯನ ಕಿರಣಗಳತ್ತ ಮೋರೆ ತಿರುಗಿಸಿ ನಗು ಬೀರುವ ಸೂರ್ಯಕಾಂತಿ ಚೆಲುವಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ವೀಕೆಂಡ್ ಟ್ರಿಪ್ಪಿಗಾಗಿ ಬಂಡೀಪುರಕ್ಕೆ ತೆರಳುತ್ತಿದ್ದಾಗ ಈ ಜಮೀನಿನ ಚೆಲುವು ಕಂಡು ಬಂದೆವು ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ. ಈ ಬಾರಿ ಸೂರ್ಯ ಕಾಂತಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದ್ದರೂ ಮೇ ತಿಂಗಳಿನಲ್ಲಿ ಮಳೆ ಆಗದ ಕಾರಣ ಬೆಳೆ ನಷ್ಟ ಸಂಭವಿಸಿದೆ.