ಚಾಮರಾಜನಗರದ ; . ಇಂದು ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರಕ್ಕೆ ಬಿ.ಎಸ್.ಯಡಿಯೂರಪ್ಪ ತೆರಳಿದ್ದು ಆತ್ಮಹತ್ಯೆಗೆ ಶರಣಾದ ಅಭಿಮಾನಿ ರವಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬರೀ ಸಾಂತ್ವನ ಹೇಳಿದ್ದಲ್ಲದೆ
ಆತ್ಮಹತ್ಯೆ ಮಾಡಿಕೊಂಡ ರವಿ ಕುಟುಂಬಕ್ಕೆ ಭಾರೀ ಆರ್ಥಿಕ ನೆರವು ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಇಂದು 5 ಲಕ್ಷ ರೂ. ನೆರವು ನೀಡಿದ ಅವರು ಇನ್ನೂ 5 ಲಕ್ಷ ರೂ. ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಈ ವೇಳೆ ರವಿ ತಾಯಿ ಯಡಿಯೂರಪ್ಪಗೆ ಕಾಲು ಮುಗಿದಿದ್ದಾರೆ. ಸುಮಾರು ಹತ್ತು ನಿಮಿಷ ಮೃತನ ಮನೆಯಲ್ಲಿದ್ದ ಅವರು ನಂತರ ತೆರಳಿದರು.
ಯಡಿಯೂರಪ್ಪ ಅವರ ಆಗಮನ ವಾಗುತಿದ್ದಂತೆಯೇ ಗುಂಡ್ಲು ಪೇಟೆಯಲ್ಲಿ ಅಭಿಮಾನಿಗಳ ನೂಕು ನುಗ್ಗಲು ಉಂಟಾಯಿತಲ್ಲದೆ ಅಭಿಮಾನಿಗಳು ಮುಂದಿನ ಸಿಎಂ ವಿಜಯೇಂದ್ರ, ರಾಜಾ ಹುಲಿಗೆ ಜೈ ಎಂದು ಘೋಷಣೆ ಕೂಗಿದರು.
ಅಲ್ಲಿಂದ ತೆರಳುವ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ಪಕ್ಷವನ್ನು ಬಲಪಡಿಸಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಡುತ್ತೇನೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಡ್ಡಾರಿಗೆ ಇದು ನಾನು ನೀಡಿರುವ ಭರವಸೆ. ಗಣೇಶ ಚತುರ್ಥಿ ಬಳಿಕ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಪ್ರತಿ ವಾರ ಒಂದು ಜಿಲ್ಲೆಗೆ ಹೋಗಿ ಸಂಘಟನೆ ಬಲಪಡಿಸುವೆ. ನನ್ನ ಕಣ್ಣೆದುರೇ ಯೋಗ್ಯ ವ್ಯಕ್ತಿಯನ್ನು ಬೆಳೆಸಬೇಕೆಂಬ ಉದ್ದೇಶವಿದೆ. ಬೊಮ್ಮಾಯಿರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಸಂಯಮ ಕಳೆದುಕೊಂಡು ಮಾತನಾಡ್ತಿದ್ದಾರೆ. ಅವರಿಗೆ ಈ ರೀತಿಯ ಮಾತುಗಳು ಶೋಭೆ ತರುವುದಿಲ್ಲ. ಸಂಪುಟ ರಚನೆಯಲ್ಲಿ ಬೊಮ್ಮಾಯಿಗೆ ಪೂರ್ಣ ಸ್ವಾತಂತ್ರ್ಯವಿದೆ. ಸಚಿವ ಸಂಪುಟ ರಚನೆಗೆ ನಾನು ಯಾವುದೇ ಸಲಹೆ ನೀಡಲ್ಲ ಎಂದು ಹೇಳಿದರು.