ಬೆಂಗಳೂರು : ನಿನ್ನೆ ನಡೆದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದ ರಾಮದಾಸ್ , ಅಪ್ಪಚ್ಚು ರಂಜನ್ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಮೂರು ಜನ ಶಾಸಕರು ಯಾವುದೇ ಅಸಮಧಾನ ವ್ಯಕ್ತಪಡಿಸದೇ, ತಾವು ಪಕ್ಷದ ಶಿಸ್ತಿನ ಸಿಪಾಯಿ ಎಂಬುದನ್ನು ಸಾಬೀತು ಪಡೆಸಿದ್ದಾರೆ.
ರಾಮದಾಸ್ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾಗಿ ಐದು ಬಾರಿ ಆಯ್ಕೆಯಾದರೂ ಈ ಬಾರಿ ಸಚಿವ ಸಂಪುಟದಲ್ಲಿ ಯಾವುದೇ ಸ್ಥಾನ ಸಿಕ್ಕಿಲ್ಲ. ಈ ಕುರಿತು ಮಾತನಾಡಿದ ಅವರು ನಾನು ಮಂತ್ರಿ ಹುದ್ದೆಗಾಗಿ ಯಾವ ಲಾಬಿಗೂ ಮುಂದಾಗುವುದಿಲ್ಲ ಎಂದು ಹೇಳಿದರು. 2010 ರಿಂದ 2013ರ ವರೆಗೂ ಯಡಿಯೂರಪ್ಪನವರ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ರಾಮದಾಸ್ ಆರ್ಎಸ್ಎಸ್ ಹಿನ್ನಲೆಯಿಂದ ಬಂದವರಾಗಿದ್ದಾರೆ.
ಕು0ದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯೂ ಸಹ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು 2012ರಲ್ಲಿ ಪಕ್ಷದಿಂದ ಹೊರ ಬಂದರು. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾದರು. ಪಕ್ಷ ಇವರಿಗೆ ಸಚಿವ ಸ್ಥಾನ ನೀಡಿದಾಗ ಅದನ್ನು ತಿರಸ್ಕರಿಸಿದರು. ನನಗೆ ಜಾತಿ ಆಧಾರಿತ ಅಧಿಕಾರ ಬೇಡ ನಾನು ಪಕ್ಷಕ್ಕೆ ಮತ್ತು ಕ್ಷೇತ್ರಕ್ಕೆ ಮಾಡಿದ ಕೆಲಸ ನೋಡಿ ಕೊಡಿ ಎಂದು ಹೇಳಿದ್ದರು. ಇವರನ್ನು ‘ಕುಂದಾಪುರದ ವಾಜಪೇಯಿ’ ಎಂದು ಕರೆಯುತ್ತಾರೆ.
ಮಡಿಕೇರಿಯ ಶಾಸಕ, ಮಾಜಿ ಸಚಿವ ಅಪ್ಪಚ್ಚು ರಂಜನ್ ಸಹ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರತೀ ಚುನಾವಣೆಯಲ್ಲಿ ಇವರು ಹೆಚ್ಚೆಚ್ಚು ಮತಗಳನ್ನು ಗಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಇವರು, ತಾವು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ, ಹಾಗಾಗಿ ಸಚಿವ ಸಂಪುಟ ಸೇರದೆ ಇರುವುದು ನನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದರು. ಅಪ್ಪಚ್ಚು ರಂಜನ್ ಆರ್ಎಸ್ಎಸ್ ಹಿನ್ನಲೆಯಿಂದ ಬಂದವರಾಗಿದ್ದಾರೆ, ಇವರು ಕೊಡಗಿನ ಭಾಗದಲ್ಲಿ ಪಕ್ಷವನ್ನು ಕಟ್ಟುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಇವರು 2011 ಯಡಿಯೂರಪ್ಪನವರ ಸಂಪುಟದಲ್ಲಿ ಕ್ರೀಡಾ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ