ಚಾಮರಾಜನಗರ: ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ, ಆದರೆ ಗಾಳಿ ಸಹಿತ ಸುರಿದ ಮಳೆಗೆ ಜೋಳದ ಬೆಳೆ ನೆಲಕಚ್ಚಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರದ್ದಾಗಿದೆ.
ಜಿಲ್ಲೆಯ ಹನೂರು ತಾಲ್ಲೂಕಿನ ಅಜ್ಜೀಪುರ ಸಮೀಪದ ಗಂಗನದೊಡ್ಡಿ ಗ್ರಾಮದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಗ್ರಾಮದ ಶ್ರೀಕಂಠರಾದ್ಯ ರವರಿಗೆ ಸೇರಿದ ಜೋಳದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಇದರಿಂದಾಗಿ ರೈತ ಶ್ರೀಕಂಠರಾದ್ಯ ಕಂಗಲಾಗಿದ್ದಾರೆ. ಇನ್ನೊಂದೆಡೆ ವೆಂಕಟೇಶ್, ಪಾಪಣ್ಣ, ಅಮ್ಜದ್ ಖಾನ್ ಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಬಾಳೆಯೂ ಗಾಳಿಗೆ ಮುರಿದು ಬಿದ್ದಿದೆ.
ಈ ವ್ಯಾಪ್ತಿಯಲ್ಲಿ ಸಿಡಿಲು, ಗಾಳಿ ಸಹಿತ ಮಳೆ ಸುರಿದಿದ್ದು, ಗ್ರಾಮದ ಮನೆಯೊಂದರ ಮೇಲ್ಛಾವಣಿ ಕುಸಿತ ಘಟನೆ ನಡೆದಿದ್ದು, ಮನೆಯಲ್ಲಿದ್ದರಿಗೆ ಗಾಯವಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೆಲ್ಲದರ ನಡುವೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತ್ತಿರುವ ತಮಿಳುನಾಡಿನ ತಾಳವಾಡಿ ಸುತ್ತ ಮುತ್ತ ಭಾರಿಮಳೆಯಾಗಿದ್ದು, ಬಿಸಿಲಿನ ತಾಪಮಾನಕ್ಕೆ ಬೆಂಡಾಗಿ ಹೋಗಿದ್ದ ತಾಳವಾಡಿ ಜನತೆಯ ಮುಖದಲ್ಲಿ ಮಂದಹಾಸ ಮೂಡಿದೆ. ತಾಳವಾಡಿ ಸೂಸಯ್ಯಪುರಂ ಡಿಕಿನರೈ, ಕರಲವಾಡಿ ಸೇರಿದಂತೆ ಹಲವಾರು ಕಡೆ ಭಾರಿ ಮಳೆಯಾಗಿದೆ.