ಮಂಗಳೂರು: ಕೆಎಂಸಿ ಆಸ್ಪತ್ರೆ ಅತ್ತಾವರದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು ಜೂನ್ 13ರಂದು ಯಶಸ್ವಿಯಾಗಿ ಎಚ್.ಪಿ.ವಿ. ಲಸಿಕೆ ಅಭಿಯಾನವನ್ನು ಆಸ್ಪತ್ರೆಯಲ್ಲಿ ಆಯೋಜಿಸಿತು.
ಕಾರ್ಯಕ್ರಮವು ಆಸ್ಪತ್ರೆಯ ಸುಶ್ರುತಾ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ದೀಪಕ್ ಆರ್ ಮಡಿ ಭಾಗವಹಿಸಿದ್ದರು. ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಘಟಕದ ಮುಖ್ಯಸ್ಥೆ ಡಾ. ಅಪರ್ಣಾ ರಾಜೇಶ್ ಭಟ್ ಅತಿಥಿಗಳನ್ನು ಹಾಗೂ ಅಹ್ವಾನಿತರನ್ನು ಸ್ವಾಗತಿಸಿದರು.
ಉದ್ಘಾಟನೆಯ ನಂತರ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ.ಅಪರ್ಣಾ ರಾಜೇಶ್ ಭಟ್, ಡಾ. ನೀನಾ ಮಹಾಲೆ ಮತ್ತು ಡಾ. ಸೌಧ ಅವರು ಎಚ್.ಪಿ.ವಿ. ಲಸಿಕೆಯ ಮಹತ್ವ ಮತ್ತು ಗರ್ಭಕಂಠದ ಕ್ಯಾನ್ಸರ್ನ ಕುರಿತು ಮಾಹಿತಿಯನ್ನು ನೀಡಿದರು. ಡಾ. ಸ್ಪಂದನಾ ರಾವ್ ಕೆ ಕಾರ್ಯಕ್ರಮ ನಿರೂಪಿಸಿದರು.
ತಮ್ಮ ಭಾಷಣದಲ್ಲಿ, ಡಾ. ದೀಪಕ್ ಮಡಿ ಅವರು ಗರ್ಭಕಂಠದ ಕ್ಯಾನ್ಸರ್ ಮತ್ತು ಎಚ್.ಪಿ.ವಿ. ಲಸಿಕೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರಯತ್ನಗಳನ್ನು ಶ್ಲಾಘಿಸಿದರು. ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಪ್ರಮುಖ ತಂತ್ರವಾಗಿ ವ್ಯಾಕ್ಸಿನೇಷನ್ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
9 ರಿಂದ 26 ವರ್ಷ ವಯಸ್ಸಿನ ಸುಮಾರು 134 ಮಹಿಳೆಯರು ಎಚ್.ಪಿ.ವಿ. ಲಸಿಕೆಯನ್ನು ಸ್ವೀಕರಿಸಿದರು. ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಈ ಉಪಕ್ರಮವು ಮಹಿಳೆಯರ ಆರೋಗ್ಯ ಮತ್ತು ಸಮುದಾಯದಲ್ಲಿ ಯೋಗಕ್ಷೇಮವನ್ನು ಉತ್ತೇಜಿಸುವ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.