ಶಿವಮೊಗ್ಗ: ತಾಲ್ಲೂಕಿನ ಕಡೇಕಲ್ ಗ್ರಾಮ ಅಬೀದ್ ಖಾನ್(34) ರೌಡಿ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, 2000ನೇ ಸಾಲಿನಿಂದ ಕಾನೂನು ಬಾಹೀರ ಚಟುವಟಿಕೆಗಳಾದ ಕೊಲೆ, ಕೊಲೆ ಬೆದರಿಕೆ, ಹಲ್ಲೆ ಮತ್ತು ಲಾಭಕ್ಕಾಗಿ ಗಾಂಜಾ ಮಾರಾಟ ಹಾಗೂ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿ ತನ್ನ ಸಹಚರರೊಂದಿಗೆ ಸೇರಿ ಅಕ್ರಮ ಕೂಟ ಕಟ್ಟಿಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಾ ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ತರುವ ನಡವಳಿಕೆ ಇರುವಂತಹ ವ್ಯಕ್ತಿಯಾಗಿರುತ್ತಾನೆ.
ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಪ್ರಕರಣ ಸೇರಿದಂತೆ 13 ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ. ಈತನು ಭಾಗಿಯಾಗಿರುವ ಪ್ರಕರಣಗಳಲ್ಲಿ ಕೈಗೊಂಡಿರುವ ಕಾನೂನು ಕ್ರಮಗಳನ್ನು ಕೂಡ ಲೆಕ್ಕಿಸದೇ, ಕಾನೂನು ಬಾಹೀರ ಚಟುವಟಿಕೆಗಳನ್ನು ಮುಂದುವರೆಸಿರುತ್ತಾನೆ ಹಾಗೂ ಸಾರ್ವಜನಿಕೆ ಸುವ್ಯವಸ್ಥೆಗೆ ದುಷ್ಪರಿಣಾಮಗಳನ್ನು ಎಸಗುವ ಸಾದ್ಯತೆಗಳಿರುವುದರಿಂದ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡುವಂತೆ ಕೋರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಪ್ರಸ್ಥಾವನೆ ಸಲ್ಲಿಸಿದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಸದರಿ ವ್ಯಕ್ತಿಯ ವಿರುದ್ಧ ಬಂಧನ ಆಜ್ಞೆಯನ್ನು ಹೊರಡಿಸಿ ಕೇಂದ್ರ ಕಾರಾಗೃಹ ಬಳ್ಳಾರಿಯಲ್ಲಿ ಇರಿಸಲು ಆದೇಶಿಸಿರುತ್ತಾರೆ.
ನಂತರ ದಿನಾಂಕಃ-08-07-2022 ರಂದು ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಅಬೀದ್ ಖಾನ್ (ಕಡೇಕಲ್ ಅಬೀದ್) ಈತನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟು ವರದಿ ನೀಡಿದ ಮೇರೆಗೆ, ದಿನಾಂಕಃ-18-07-2022 ರಂದು ಘನ ಕರ್ನಾಟಕ ಸರ್ಕಾರವು ಸದರಿ ಆದೇಶವನ್ನು ಸ್ಥಿರೀಕರಿಸಿ, ಸದರಿ ವ್ಯಕ್ತಿಯ ಬಂಧನದ ಆದೇಶವನ್ನು ದಿನಾಂಕಃ-06-06-2022 ರಿಂದ 1 ವರ್ಷದ ಅವಧಿಯವರೆಗೆ ಮುಂದುವರೆಸಿ ಆದೇಶಿಸಿರುತ್ತದೆ.