ಬೆಂಗಳೂರು: ಮಾದರಿ ಶಾಲೆ ರೂಪಿಸಬೇಕು ಎನ್ನುವುದು ಸರಕಾರದ ಗುರಿ. ಅದಕ್ಕಾಗಿ ಈಗಿರುವ ಶಾಲೆಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಚಿಂತನೆ ನಡೆಸಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸಂವಾದದಲ್ಲಿ ಮಾತನಾಡಿದ ಅವರು, ಮಾದರಿ ಶಾಲೆ ರೂಪಿಸಬೇಕು ಎನ್ನುವುದು ಸರಕಾರದ ಗುರಿ. ಅದರಲ್ಲಿ ತರಗತಿಗೊಬ್ಬ ಶಿಕ್ಷಕ ಮತ್ತು ಪ್ರತೀ ವಿಭಾಗಕ್ಕೆ ಶಿಕ್ಷಕರು ಇರಬೇಕು. ತರಗತಿ ಕೊಠಡಿಗಳು ಅಚ್ಚುಕಟ್ಟಾಗಿ ಇರಬೇಕು. ಪ್ರತೀ ಮಗುವಿನ ಬಗ್ಗೆ ಗಮನಹರಿಸಬೇಕು. ಇದು ಇನ್ನೂ “ಟೇಕ್ ಆಫ್’ ಹಂತದಲ್ಲಿದೆ. ಇಲಾಖೆ ಹೋಬಳಿ ಮಟ್ಟದಲ್ಲಿ ಇದನ್ನು ಪರಿಚಯಿಸಲಿದೆ. ಆದರೆ ಈಗಿರುವ ಶಿಕ್ಷಕರ ಸಂಖ್ಯೆಯಲ್ಲಿ ಇದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಏಕ ಹಳ್ಳಿ ಗ್ರಾಮ ಪಂಚಾಯತ್ಗಳಲ್ಲಿ ಇರುವ ಹಲವು ಶಾಲೆಗಳ ಸಂಖ್ಯೆಯನ್ನು 2 ಅಥವಾ 3ಕ್ಕೆ ಇಳಿಸಲಾಗುವುದು ಎಂದಿದ್ದಾರೆ.
ನಮ್ಮಲ್ಲಿ 23 ವಿದ್ಯಾರ್ಥಿಗಳಿಗೊಬ್ಬರಂತೆ ಶಿಕ್ಷಕರಿದ್ದಾರೆ. ಹತ್ತು ಮಕ್ಕಳಿರುವ ಶಾಲೆಗೆ ಒಬ್ಬ ಶಿಕ್ಷಕರನ್ನು ನೀಡುತ್ತೇವೆ. ಒಂದು ವೇಳೆ 11 ಮಕ್ಕಳಿದ್ದರೆ ಅಂತಹ ಶಾಲೆಗೆ ಇಬ್ಬರು ಶಿಕ್ಷಕರನ್ನು ನೀಡಲಾಗುತ್ತದೆ. ಪ್ರತೀ ಐದು ಮಕ್ಕಳಿಗೆ ಒಬ್ಬರಂತೆ ಶಿಕ್ಷಕರು ಇರಬೇಕು ಎಂಬುದು ಗುರಿ ಎಂದರು.
ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚು ತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವುದೇ ಶಾಲೆಗಳನ್ನು ನಾವು ಮುಚ್ಚುವುದಿಲ್ಲ. ಮುಚ್ಚಿಸುವ ಯಾವುದೇ ನಿರ್ಣಯವನ್ನು ಸರಕಾರ ಕೈಗೊಳ್ಳುವುದಿಲ್ಲ; ಅಂತಹ ಪ್ರಸ್ತಾ ವನೆಯೂ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿ ಸಿದರು. ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿ ಸಲ್ಲಿಸಿದ ವರದಿಯಲ್ಲಿ 27 ವಿಷಯ ಪತ್ರಿಕೆಗಳಿವೆ. ಅವುಗಳನ್ನು ಸಾರ್ವಜನಿಕರ ಅಧ್ಯಯನಕ್ಕೆ ಮುಕ್ತಗೊಳಿಸಲಾಗುವುದು. ಅಲ್ಲಿ ಬರುವ ಸಲಹೆ- ಸೂಚನೆಗಳು, ಅಭಿಪ್ರಾಯಗಳನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನ ಮಂಡಳಿ ಮತ್ತು ತರಬೇತಿ ಸಂಸ್ಥೆ(ಎನ್ಸಿಇಆರ್ಟಿ)ಗೆ ಕಳುಹಿಸಲಾಗುವುದು. ಅದು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಸ್ತುತ 15 ಸಾವಿರ ಶಿಕ್ಷಕರ ನೇಮಕಕ್ಕೆ ಸರಕಾರ ನಿರ್ಧರಿಸಿದ್ದು, ಪ್ರಕ್ರಿಯೆ ಆರಂಭಿಸಲಾಗುವುದು. ಒಂದು ವೇಳೆ ಈ ಪೈಕಿ ಕೇವಲ 10 ಸಾವಿರ ಶಿಕ್ಷಕರ ನೇಮಕಾತಿಯಾದರೆ, ಪುನಃ ಜನವರಿ ಅಥವಾ ಫೆಬ್ರವರಿಯಲ್ಲಿ ಉಳಿದ ಐದು ಸಾವಿರ ಶಿಕ್ಷಕರ ನೇಮಕಕ್ಕೆ ಮತ್ತೆ ಸಿಇಟಿ ನಡೆಸಲಾಗುವುದು ಎಂದ ಅವರು, ಇದರ ಜತೆಗೆ ಪ್ರತೀ ವರ್ಷ ಅಗತ್ಯವಿರುವ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು ಎಂದರು.