ಮೂಡಿಗೆರೆ: ಬಡತನ, ಉದ್ಯೋಗ, ಶಿಕ್ಷಣ ಸೇರಿದಂತೆ ಜನರ ಎಲ್ಲಾ ಸಮಸ್ಯೆ ನಿವಾರಣೆ ಮಾಡಲು ಜೆಡಿಎಸ್ಗೆ ಬಹುಮತ ಸಿಕ್ಕಿದರೆ ಮಾತ್ರ ಸಾಧ್ಯವಿದೆ. ಹಾಗಾಗಿ ಮೂಡಿಗೆರೆ ಕ್ಷೇತ್ರದ ಜೆಡಿಎಸ್ನ ಅಧಿಕೃತ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಅವರು ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದರು. ಸಮಿಶ್ರ ಸರಕಾರದಲ್ಲಿ ಕಾಂಗ್ರೆಸ್ನ ವಿರೋಧದ ನಡುವೆಯೂ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ. ನಮ್ಮ ಪಕ್ಷ ಬಹುಮತ ಬಂದರೆ ಸ್ತ್ರೀಶಕ್ತಿ ಸಂಘದ ಸಾಲ ಸಂಪೂರ್ಣ ಮನ್ನ ಮಾಡಲಾಗುವುದು.
ಅರಣ್ಯ ಕಾಯಿದೆ ಹೆಸರಿನಲ್ಲಿ ಅತಿ ಕ್ರಮಣವಾಗಿ ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ತಾನು ಮತ ಕೇಳುವುದಕ್ಕೆ ಬರುವುದಿಲ್ಲ. ಜನರ ಸಮಸ್ಯೆ ನಿವಾರಣೆಗಾಗಿ ಪಂಚರತ್ನ ಯೋಜನೆಗೆ ೨.೫ಲಕ್ಷ ಕೋಟಿ ಹಣ ಸರಕಾರ ಬಂಡವಾಳ ಕ್ರೂಡೀಕರಿಸಬೇಕಿದೆ. ಈ ಯೋಜನೆ ಜಾರಿಗೊಳಿಸಲು ಜೆಡಿಎಸ್ಗೆ ಬಹುಮತ ನೀಡಬೇಕೆಂದು ಮನವಿ ಮಾಡಿದರು.
ಚಿತ್ರದುರ್ಗದಲ್ಲಿ ರೈತವೋರ್ವ ಈ ಬಾರಿ ಜೆಡಿಎಸ್ ಬರಬೇಕೆಂದು ೨೦ ಸಾವಿರ ಹಣ ನೀಡಲು ಮುಂದಾಗಿದ್ದರು. ಇದೇ ರೀತಿಯಲ್ಲಿ ರಾಜ್ಯದಲ್ಲಿ ಈ ಬಾರಿ ಜೆಡಿಎಸ್ಗೆ ಜನರು ಉತ್ತಮವಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮೇ.೧೮ಕ್ಕೆ ಎಚ್.ಡಿ. ದೇವೇಗೌಡ ಅವರ ೯೨ನೇ ಜನ್ಮ ದಿನಾಚರಣೆ ಇದೆ. ಅದಕ್ಕೆ ಉಡುಗೊರೆಯಾಗಿ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾ ರಸ್ವಾಮಿ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಉತ್ತಮ ಕೆಲಸ ಮಾಡಿದರೂ ತನ್ನನ್ನು ಕತ್ತು ಹಿಡಿದು ನೂಕಿದ್ದಾರೆ. ಜಗದೀಶ್ ಶೆಟ್ಟರ್ನಂತಹ ಹಿರಿಯ ನಾಯಕರನ್ನೇ ಬಿಡಲಿಲ್ಲ. ಬಿಜೆಪಿಯವರ ಕೋಮುವಾದ ಧೋರಣೆಯಿಂದ ಬೇಸತ್ತು ಹೋಗಿದ್ದೇನೆ. ಇದು ಜಾತ್ಯಾತೀತ ರಾಷ್ಟ್ರ. ಎಲ್ಲರೂ ಸಾಮರಸ್ಯದಿಂದ ಬದುಕಬೇಕು.
ಆದರೆ ಬಿಜೆಪಿಯವರು ಅವರು ಮಾತ್ರ ಬದುಕುವ ಬಗ್ಗೆ ಚಿಂತನೆ ನಡೆಸುತ್ತಾರೆ. ಅತಿವೃಷ್ಟಿಗೆ ಅನುದಾನ ಕೇಳಿದರೆ ಕೊಡಲಿಲ್ಲ. ಅದೇ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೆ ಕೇಳಿದ ಕೂಡಲೇ ಯೋಚನೆ ಮಾಡದೇ ಅನುದಾನ ನೀಡುತ್ತಿದ್ದರು. ಈ ರಾಜ್ಯದಲ್ಲಿ ದೀನ ದಲಿತರ, ಮಹಿಳೆಯರ, ಬಡವರ, ರೈತರ ಕಲ್ಯಾಣಕ್ಕಾಗಿ ಶ್ರಮಿಸುವ ಏಕೈಕ ಮುಖ್ಯಮಂತ್ರಿ ಇದ್ದರೆ ಅದು ಎಚ್.ಡಿ.ಕುಮಾರಸ್ವಾಮಿ ಮಾತ್ರ. ಅವರಿಗೆ ಬಲ ಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಆರಂಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರು ಸಾವಿರಾರು ಮಂದಿ ಕಾರ್ಯಕರ್ತ ರೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಿ, ೨ ನೇ ನಾಮಪತ್ರ ಸಲ್ಲಿಸಿ, ನಂತರ ಅಡ್ಯಂತಾಯ ರಂಗ ಮಂದಿರಕ್ಕೆ ಬರುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಕ್ಷೇತ್ರ ಸಮಿತಿ ಸದಸ್ಯ ಡಿ.ಜೆ.ಸುರೇಶ್, ಮುಖಂಡರಾದ ಕಳಸ ಮಂಜಪಯ್ಯ, ಅರೆಕುಡಿಗೆ ಶಿವಣ್ಣ ಮತ್ತಿತರರಿದ್ದರು.