ಚಿಕ್ಕಮಗಳೂರು : ದೇವಗೊಂಡನಹಳ್ಳಿ ಗ್ರಾಮದ ಮಹೇಶ್ ಮತ್ತು ಇತರರು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ಶಾಸಕ ಸಿ.ಟಿ.ರವಿ ತಮ್ಮ ನಿವಾಸದಲ್ಲಿ ಬಿಜೆಪಿ ಪಕ್ಷದ ಬಾವುಟವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ ಮಹೇಶ್ ನನ್ನ ಕಾಲೇಜು ಸಹಪಾಠಿ, ೨೦೦೮ರಲ್ಲಿ ನಾನು ಬೀರೂರು ಕ್ಷೇತ್ರದ ಮೂಲಕ ಚಿಕ್ಕಮಗಳೂರು ವಿಭಾಗ ಸೇರಿದ ದಿನದಿಂದ ಇಲ್ಲಿಯವರೆಗೂ ೧೫ ವರ್ಷಗಳ ನಂತರ ನಮ್ಮ ಜತೆ ಬಂದಿದ್ದಾನೆ ಎಂದು ಹೇಳಿದರು.
ನರಸೀಪುರ ಗ್ರಾಮದಲ್ಲಿ ಜೆಡಿಎಸ್ನ ಬಲವಾಗಿದ್ದ ಮಹೇಶ್ನ ವೋಟ್ ಬ್ಯಾಂಕ್ ಒಡೆಯಬೇಕೆಂಬ ಪ್ರಯತ್ನ ವಿಫಲವಾಗುತಿತ್ತು, ಅಂತಹ ಪರಿಶ್ರಮಿ, ಜನರ ಸೇವಕ, ಬಿಜೆಪಿ ಪಕ್ಷ ಸೇರ್ಪಡೆಗೊಂಡಿರುವುದರಿಂದ ಪಕ್ಷಕ್ಕೆ ಬಲ ಬಂದಂತಾಗಿದೆ, ಅರಣ್ಯ ಇಲಾಖೆಯಿಂದ ಬೂಜೇನಹಳ್ಳಿ ಗ್ರಾಮಸ್ಥರಿಗೆ ತೊಂದರೆಯಾದ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ನಿಂತು ಊರಿಗೆ ಸಹಕಾರಿಯಾಗಿ ನಿಲ್ಲುವುದರ ಜತೆಗೆ ಊರಿನ ಕಾಂಕ್ರೀಟ್ ರಸ್ತೆ, ದೇವಾಲಯ, ಸಮುದಾಯ ಭವನ ನಿರ್ಮಿಸುವುದರ ಮೂಲಕ ಊರಿನ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿದ್ದೇನೆ, ಅವರೆಲ್ಲ ಬಿಜೆಪಿ ಪಕ್ಷ ಸೇರ್ಪಡೆಗೊಂಡಿರುವುದು ಪಕ್ಷದ ಬಲವನ್ನು ಹೆಚ್ಚಿಸಿದೆ ಎಂದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಮಾತನಾಡಿ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತ ಮತ್ತು ಸಿ.ಟಿ.ರವಿ ರವರ ನಾಯಕತ್ವವನ್ನು ಮೆಚ್ಚಿ ಜೆಡಿಎಸ್, ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡ ನರಸೀಪುರ ಮಹೇಶ್ವರಪ್ಪ, ಗೋಪಿ ಮತ್ತು ಬೆಂಬಲಿಗರಿಗೆ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜಯಕುಮಾರ್, ಮುಖಂಡರಾದ ಗಾಳಿಹಳ್ಳಿ ಶಿವಾನಂದ್, ಚಂದ್ರಶೇಖರ್, ಪಾದಮನೆ ದಿನೇಶ್ ಇತರರು ಉಪಸ್ಥಿತರಿದ್ದರು.