ಮೂಡಿಗೆರೆ : ಮೀಸಲು ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಪೂರಕ ವಾತವರಣವಿದ್ದು, ಪಕ್ಷದ ವರಿಷ್ಠರು ತಮಗೆ ಬಿ.ಫಾರಂ ನೀಡುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಬಿ.ನಿಂಗಯ್ಯ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜೆಡಿಎಸ್ ಮೊದಲ ಪಟ್ಟಿಯಲ್ಲಿ ಮೂಡಿಗೆರೆ ಮೀಸಲು ಕ್ಷೇತ್ರ ದಿಂದ ತಮ್ಮ ಹೆಸರು ಘೋಷಣೆ ಮಾಡಿದ್ದು, ಕಳೆದ ೩೫ ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಕ್ಷೇತ್ರದಲ್ಲಿ ತಮ್ಮ ಪರವಾದ ಅಲೆ ಇದೆ.
ಈ ಹಿನ್ನಲೆಯಲ್ಲಿ ತಮಗೆ ಟಿಕೆಟ್ ನೀಡುವಂತೆ ವರಿಷ್ಠರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಬಿಜೆಪಿ ಟಿಕೆಟ್ ವಂಚಿತ ಎಂ.ಪಿ. ಕುಮಾರಸ್ವಾಮಿ ಜೆಡಿಎಸ್ ಸೇರ್ಪಡೆಗೊಂಡಿರುವುದು ಸ್ವಾಗತಾರ್ಹ. ಆದರೆ, ಅವರು ಪಕ್ಷ ಸೇರ್ಪಡೆಗೊಂಡ ತಕ್ಷಣ ಟಿಕೆಟ್ ನೀಡುವುದು ಸರಿಯಲ್ಲ. ಅವರು ಪಕ್ಷದಲ್ಲಿ ಕೆಲಸ ಮಾಡಲಿ. ಒಂದು ವೇಳೆ ಅವರಿಗೆ ಟಿಕೆಟ್ ನೀಡಿದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಅಪಮಾನವಾಗಲಿದೆ. ಈ ನಿಟ್ಟಿನಲ್ಲಿ ವರಿಷ್ಠರು ಚಿಂತಿಸಬೇಕೆಂದು ಮನವಿ ಮಾಡಿದರು.
ಪಕ್ಷದ ಏಳಿಗೆಗೆ ದುಡಿದಿರುವ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ನೀಡಬೇಕೆನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಟಿಕೆಟ್ ನೀಡುವಾಗ ಪಕ್ಷ ಮತ್ತು ವ್ಯಕ್ತಿಯ ವರ್ಚ್ಚಸ್ಸು, ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡುವ ಮಾನದಂಡ ವನ್ನು ಅನುಸರಿಬೇಕಾಗುತ್ತದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮಗೆ ಬಿ.ಫಾರಂ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಟಿಕೆಟ್ ನೀಡುವ ವಿಚಾರ ಕದ್ದುಮುಚ್ಚಿ ಮಾಡುವಂತದಲ್ಲ. ತಮನ್ನು ಕತ್ತಲೆಯಲ್ಲಿಟ್ಟು ಬಿ.ಫಾರಂ ನೀಡಿದರೇ ಅದು ತಪ್ಪಾಗುತ್ತದೆ. ಎಚ್.ಡಿ.ಕುಮಾರಸ್ವಾಮಿಯವರು ಗೊಂದಲವನ್ನು ಸರಿಪಡಿಸುವ ವಿಶ್ವಾಸವಿದೆ.
ಒಂದು ವೇಳೆ ಎಂ.ಪಿ.ಕುಮಾರಸ್ವಾಮಿಗೆ ಬಿ.ಫಾರಂ ನೀಡಿದಲ್ಲಿ ಕಾರ್ಯಕರ್ತರ ಸಭೆ ಕರೆದು ಎರಡು ಮೂರು ದಿನಗಳಲ್ಲಿ ತಮ್ಮ ರಾಜಕಿಯ ಭವಿಷ್ಯದ ನಿರ್ಧಾರ ಪ್ರಕಟಿಸು ವುದಾಗಿ ಹೇಳಿದರು.ನಾನು ಶ್ರಮವಹಿಸಿ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಎಂ.ಪಿ.ಕುಮಾರಸ್ವಾಮಿಗೆ ನೀಡು ವುದಾದರೇ, ವಿಧಾನ ಪರಿಷತ್ ಸ್ಥಾನ ನೀಡಲಿ ನನ್ನ ಅಭ್ಯಂತರವಿಲ್ಲ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಬಾರದು ಎಂದು ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಜಾಕೀರ್ ಹುಸೇನ್, ಸುರೇಶ್, ಖಲಂದರ ಸೇರಿದಂತೆ ಅನೇಕರು ಇದ್ದರು.