ಮೂಡಿಗೆರೆ: ಶಿವಮೊಗ್ಗ ಮತ್ತು ತುಮಕೂರಿನ ಹಲವು ನ್ಯಾಯಾಲಯಗಳಲ್ಲಿ ಹಣಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆರೋಪಿಗಳಿಗೆ ಜಾಮೀನು ನೀಡುತ್ತಿದ್ದ ವ್ಯಕ್ತಿಯೊಬ್ಬ ಜಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕೆ.ಎಂ.ರಸ್ತೆಯ ನಿವಾಸಿ ಸುಂದರಶೆಟ್ಟಿ (72) ಎಂಬಾತ ಬಂಧಿತ. 2020ರ ನ.6ರಂದು ಶಿವಮೊಗ್ಗ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ, ಮೂರು ನಾಪತ್ತೆಯಾಗಿದ್ದರು. ಆ ಪ್ರಕರಣ ಎ-1 ಆರೋಪಿಗೆ ಸುಂದರ ಶೆಟ್ಟಿ ಜಾಮೀನು ನೀಡಲು ಬಂದಿದ್ದು ದಾಖಲೆ ಪರಿಶೀಲಿಸಿದಾಗ ಸುಂದರಶೆಟ್ಟಿಯ ಅಸಲಿಯತ್ತು ಬೆಳಕಿಗೆ ಬಂದಿದೆ.
ಜ.6ರಂದು ರಾತ್ರಿ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸುಂದರಶೆಟ್ಟಿ ಜಾಮೀನು ನೀಡಲು ಬಂದಿದ್ದರು. ಬಿಎಂಟಿಸಿ(ಬೆಂಗಳೂರು ಮಹಾನಗರ ಸಾರಿಗೆ ನಿಗಮ)ಯ ನಿರ್ವಾಹಕನಾಗಿದ್ದು 57 ವರ್ಷ ಎಂದು ಗುರುತಿಸಿ ಚೀಟಿಯಲ್ಲಿ ನಮೂದಾಗಿತ್ತು. ಗುರುತಿನ ಚೀಟಿ ಮೇಲೆ ಅಂಟಿಸಿದ್ದ ಹಾಳೆಯನ್ನು ಕಿತ್ತು ಪರಿಶೀಲಿಸಿದಾಗ ಸುಂದರಶೆಟ್ಟಿಯ ಮುಖವಾಡ ಕಳಚಿತ್ತು. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಮೀನು ನೀಡುವುದೇ ಕಾಯಕ
ನ್ಯಾಯಾಲಯಗಳಲ್ಲಿದ್ದುಕೊಂಡು ಹಣಕ್ಕಾಗಿ ಜಾಮೀನು ನೀಡುವುದೇ ಸುಂದರ್ಶೆಟ್ಟಿಯ ಕೆಲಸವಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಆತ ತುಮಕೂರು ಮತ್ತು ಶಿವಮೊಗ್ಗದ ಹಲವು ನ್ಯಾಯಾಲಯಗಳಲ್ಲಿ ಬಹಳಷ್ಟು ಆರೋಪಿಗಳಿಗೆ ಜಾಮೀನು ಕೂಡ ನೀಡಿದ್ದಾನೆ. ಈ ವಿಚಾರಣೆ ನಡೆಸಿದಾಗ ಒಂದೊಂದು ವಂಚನೆಗಳನ್ನು ಹೊರಹಾಕಿದ್ದಾನೆ.
ಆತ ಸಲ್ಲಿಸಿದ್ದ ಆಧಾರ್ ಕಾರ್ಡ್ ಕೂಡ ಮೂಲ ಪ್ರತಿ ಆಗಿರಲಿಲ್ಲಿ.
ಜಾಮೀನು ಪ್ರಮಾಣಪತ್ರದಲ್ಲಿ ತಿಳಿಸಿದಂತೆ ಆತನದ್ದು 57 ವರ್ಷ ಆಗಿರಲಿಲ್ಲ. ಅಲ್ಲದೆ ಘೋಷಣಾ ಪತ್ರದಲ್ಲಿ ಬೇರೆ ಯಾರಿಗೂ ಜಾಮೀನು ನೀಡಿಲ್ಲ ಎಂದು ಸುಳ್ಳು ಹೇಳಿದ್ದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜೋಸೆಫ್ ಎಂಬುವರ ಗುರುತಿನ ಚೀಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ನಕಲಿ ಬಿಎಂಟಿಸಿ ಕಾರ್ಡ್ಗಳನ್ನು ಬೆಂಗಳೂರಿನಲ್ಲಿ ಪಡೆದಿದ್ದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಏನಿದು ಪ್ರಕರಣ ?
ದರೋಡೆ ಯತ್ನ ಪ್ರಕರಣದ ಎ-1 ಆರೋಪಿಗೆ ಸುಂದರಶೆಟ್ಟಿ ಜಾಮೀನುದಾರರಾಗಿದ್ದಾರೆ. ಬಿಎಂಟಿಸಿ ನಿರ್ವಾಹಕ ಎಂದು ಹೇಳಿಕೊಂಡು ಜಾಮೀನು ನೀಡಲು ಮುಂದಾಗಿದ್ದರು. ಈ ವೇಳೆ ಗುರುತಿಸಿ ಚೀಟಿ ಮೇಲೆ ಅಂಟಿಸಿದ್ದ ಹಾಳೆ ಕಿತ್ತು ಪರಿಶೀಲಿಸಿದಾಗ ಮತ್ತೊಂದು ಮಂಗಳೂರು ಕೆಎಸ್ಆರ್ಟಿಸಿ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಎಂದು ನಮೂದಾಗಿತ್ತು. ಅದರಲ್ಲಿ ಎಸ್.ಜೋಸೆಫ್, ಚಾಲಕ, 53 ವರ್ಷ ಎಂದು ನಮೂದಾಗಿತ್ತು. ಗುರುತಿನ ಚೀಟಿಯ ಅವಧಿ 2019ಕ್ಕೆ ಕೊನೆಯಾಗಿತ್ತು.