ಶಿವಮೊಗ್ಗ, ಆ.12: ಭಾರತದ ಮಹಾ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ನಿರ್ದೇಶನಾಲಯ ಜನಗಣತಿದಾರರಿಗೆ ಆಯೋಜಿಸಿದ್ದ ಮಾದರಿ ದಾಖಲಾತಿ ಸಮೀಕ್ಷೆ ಮೊಬೈಲ್ ಅಪ್ಲಿಕೇಷನ್ ತರಬೇತಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ ಅವರು ತರಬೇತಿಯನ್ನು ಉದ್ದೇಶಿಸಿ ಮಾತನಾಡಿ ಮೊಬೈಲ್ ಅಪ್ಲಿಕೇಷನ್ಗಳ ಪ್ರಾಮುಖ್ಯತೆ ಮತ್ತು ದಶಕಗಳು ಕಳೆದಂತೆ ತಂತ್ರಜ್ಞಾನಗಳಲ್ಲಿ ಆದ ಬದಲಾವಣೆಗಳು ಹಾಗು ವಿವಿಧ ಸರ್ಕಾರಿ ಸಂಸ್ಥೆಗಳು ಅವುಗಳನ್ನು ಬಳಸುತ್ತಿರುವ ವಿಧಾನಗಳ ಕುರಿತು ವಿವರಿಸಿದರು. ಈ ಬಾರಿ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ದೇಶಾದ್ಯಂತ ಜನಗಣತಿ ಕಾರ್ಯ ನಡೆಯಲಿದೆ. ಗಣತಿದಾರರು ಮಾದರಿ ದಾಖಲಾತಿ ಸಮೀಕ್ಷೆ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಮನೆ ಮನೆಯಲ್ಲೂ ತಿರಂಗ ಅಭಿಯಾನದ ಅಂಗವಾಗಿ ಮನೆಗಳಲ್ಲಿ ತ್ರಿರ್ವಣ ಧ್ವಜ ಹಾರಿಸುವ ಮುಖಾಂತರ ದೇಶಕ್ಕಾಗಿ ಹುತಾತ್ಮರಾದವರಿಗೆ ಗೌರವ ತೋರಿಸುವ ಮೂಲಕ ದೇಶಪ್ರೇಮವನ್ನು ಪ್ರರ್ದಶಿಸಲು ತಿಳಿಸಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಾದ ಪರಮೇಶ್ವರಪ್ಪ ಅವರು ಮಾತನಾಡಿ ಸರ್ಕಾರದ ಯೋಜನೆಗಳನ್ನು ತಯಾರಿಸುವಲ್ಲಿ ಜನನ ಮತ್ತು ಮರಣ ದತ್ತಾಂಶದ ಪ್ರಾಮುಖ್ಯತೆಯನ್ನು ತಿಳಿಸಿದರು ಹಾಗು ಗಣತಿದಾರರು ಮೊಬೈಲ್ ಅಪ್ಲಿಕೇಷನ್ ಬಳಸಿ ಜನನ ಮತ್ತು ಮರಣ ವರದಿಯನ್ನು ದಾಖಲಿಸಲು ವಿನಂತಿಸಿದರು.
ತರಬೇತುದಾರದ ಜಯೇಶ್ ಪಿ. ಸಹಾಯಕ ನಿರ್ದೇಶಕರು ಹಾಗು ಗಿರೀಶ್ ಹೆಚ್. ಜೆ. ಕಿರಿಯ ಸಲಹೆಗಾರರು, ಜನಗಣತಿ ನಿರ್ದೇಶನಾಲಯ, ಬೆಂಗಳೂರು ಪರವಾಗಿ ಮೊಬೈಲ್ ಅಪ್ಲಿಕೇಷನ್ ಬಳಸುವುದರ ಕುರಿತು ಪ್ರಾಯೋಗಿಕವಾಗಿ ತರಬೇತಿಯನ್ನು ನೀಡಿದರು, ಉಮೇಶ್, ವ್ಯವಸ್ಥಾಪಕರು ಹಾಗು ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕಿನ ಗಣತಿದಾರರು ಉಪಸ್ಥಿತರಿದ್ದರು.