ಕಾರವಾರ: ಸಾರ್ವಜನಿಕರಿಗೆ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಿ ಭಾರತವನ್ನು ಕುಷ್ಠರೋಗದಿಂದ ಮುಕ್ತ ಮಾಡಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕುಷ್ಠರೋಗ ನಿರ್ಮೂಲನೆ ಮಾಡುವಲ್ಲಿ ಈಗಾಗಲೇ ಗಣನೀಯ ಪ್ರಗತಿಯನ್ನು ಸಾದಿಸಿದ್ದೇವೆ. ನಾವುಗಳು ತುಂಬಾ ಬದ್ಧತೆಯಿಂದ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಕುಷ್ಠರೋಗವನ್ನು ಹೋಗಲಾಡಿಸಬೇಕಾಗಿದೆ. ದೇಶದಲ್ಲಿ ಈಗಾಗಲೇ ಪೊಲೀಯೋ ರೋಗವನ್ನು ನಾವುಗಳು ಹೇಗೆ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ ಅದೇ ರೀತಿಯಲ್ಲಿ ಕುಷ್ಠರೋಗವನ್ನು ಕೂಡ ನಿರ್ವಹಣೆ ಮಾಡಬೇಕಿದೆ.
ಜನಸಾಮನ್ಯರಲ್ಲಿ ಇಂತಹ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅವುಗಳನ್ನು ಪತ್ತೆ ಹಚ್ಚಿ ಅಂತಹ ಪ್ರಕರಣಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಬೇಕು ಎಂದರು. ಬಳಿಕ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ಶಂಕರರಾವ್ ರವರು ಮಾತನಾಡಿ ಮಹಾತ್ಮ ಗಾಂಧೀಜಿಯವರು ಕುಷ್ಠರೋಗಿಗಳ ಬಗ್ಗೆ ಹೆಚ್ಚು ಸಹಾನುಭೂತಿಯನ್ನು ಹೊಂದಿದ್ದರು ಅವರು ಎಲ್ಲಾ ರೋಗಿಗಳನ್ನು ಸೇವಾ ಮನೋಭಾವದಿಂದ ಕಾಣುತ್ತಿದ್ದರು.
ಈ ಉದ್ದೇಶಕ್ಕಾಗಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡುದ್ದೇವೆ. ಕುಷ್ಠರೋಗದ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಸಾಕಷ್ಟು ಮೂಢ ನಂಬಿಕೆಗಳನ್ನು ಹೊಂದಿದ್ದಾರೆ. ಅಂತಹ ರೋಗಕ್ಕೆ ತುತ್ತಾದವರನ್ನು ಶಾಪಗ್ರಸ್ಥರು ಎಂದು ಭಾವಿಸಿ ಅಂತಹ ರೋಗಿಗಳನ್ನು ಗ್ರಾಮದಿಂದ ಹೊರಗುಳಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಇಂತಹ ರೋಗಕ್ಕೆ ಒಳಗಾದವರು ರಸ್ತೆಬದಿಗಳಲ್ಲಿ ದೇವಸ್ಥಾನದ ಬದಿಗಳಿಲ್ಲಿ, ಬಸ್ಸು ನಿಲ್ದಾಣಗಳಲ್ಲಿ ಭಿಕ್ಷೆ ಬೇಡಿ ಜೀವನ ಮಾಡುವಂತಹ ಸ್ಥಿತಿ ಇತ್ತು. ಆಗ ಇದಕ್ಕೆ ಪೂರಕ ಔಷÀಧಿಗಳು ಸಹ ಇರಲಿ ಆರ್ಯುವೇದ ಪದ್ಧತಿಯಲ್ಲಿ ಚಾಮುಲು ಗ್ರಾಮ ಎಂಬ ಎಣ್ಣೆಯನ್ನು ಕುಡಿಯಲು ಮತ್ತು ಮೈಗೆ ಹಚ್ಚಲು ಕೊಡುತ್ತಿದ್ದರು ಇಂದು ಕಾಲ ಬದಲಾಗಿದೆ ಎಲ್ಲ ರೋಗಗಳಿಗೂ ಚಿಕಿತ್ಸೆ ನೀಡಲಾಗುತ್ತದೆ ಇವುಗಳ ಅರಿವು ಅವರುಗಳಿಗೆ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯಧಿಕಾರಿ ಡಾ. ಶರದ ನಾಯಕ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ವೈದೈಕೀಯ ಅಧೀಕ್ಷಕರು ಡಾ. ಶಿವಾನಂದ ಕುಡತರಕರ್, ತಾಲೂಕು ಆರೊಗ್ಯ ಅಧಿಕಾರಿ ಸೂರಜ್ ನಾಯಕ, ಡಾ. ಶೃತಿ ಹೆಚ್.ಎನ್, ಡಾ. ರಮೇಶ್ ರಾವ್, ಡಾ. ಅನ್ನಪೂರ್ಣ ವಸ್ತ್ರದ, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.