ಕಾರವಾರ: ನಗರದಪ್ರಮುಖ ಮೈದಾನವಾಗಿರುವ ಮಾಲಾದೇವಿ ಮೈದಾನದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 47.50 ಲಕ್ಷ ವೆಚ್ಚದ ಆವರಣ ಗೋಡೆ ಹಾಗೂ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕಿ ರೂಪಾಲಿ ನಾಯ್ಕ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಮಾಲಾದೇವಿ ಮೈದಾನದ ಅಭಿವೃದ್ಧಿಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸುಸಜ್ಜಿತ ಮೈದಾನ ಹಲವು ವರ್ಷಗಳ ಕನಸು. ನಗರದ ಹೃದಯ ಭಾಗದಲ್ಲಿರುವ ಮಾಲಾದೇವಿ ಮೈದಾನದ ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗುತ್ತಿದೆ ಎಂದರು. ಬೇರೆ ಬೇರೆ ತಾಲ್ಲೂಕು ಗಳಿಂದ ಬಂದು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇಲ್ಲಿ ಸರಿಯಾದ ಸೌಲಭ್ಯಗಳು ಇಲ್ಲದಿರುವುದನ್ನು ಕಂಡು ಬೇಸರವಾಗುತ್ತಿತ್ತು. ಆದರೆ, ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. 47.50 ಲಕ್ಷ ವೆಚ್ಚದಲ್ಲಿ ಆವರಣಗೋಡೆ ನಿರ್ಮಿಸಲಾಗುತ್ತಿದೆ.
ಈ ಹಣ ಸಾಕಾಗುವುದಿಲ್ಲ. ಹೆಚ್ಚುವರಿಯಾಗಿ ಒದಗಿಸಲಾಗುವುದು. ಕ್ರೀಡಾಂಗಣಕ್ಕೆ ಬರಲು ಮೂರು ಪ್ರವೇಶ ದ್ವಾರವನ್ನು ಇಡಲಾಗುತ್ತದೆ.ಮೈದಾನದ ಅಭಿವೃದ್ಧಿಗೆ ಮುತುವರ್ಜಿವಹಿಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರೀಡೆಗಳಿಗೆ ಅನುಕೂಲವಾಗುವಂತೆ 5 ಕೋಟಿ ರೂ ಹೆಚ್ಚಿನ ವೆಚ್ಚದಲ್ಲಿ ಅಗತ್ಯ ಟ್ರ್ಯಾಕ್, ಒಳಾಂಗಣ ಕ್ರೀಡಾಂಗಣ, ವಿಶ್ರಾಂತಿ ಕೊಠಡಿ, ಪ್ರತ್ಯೇಕ ಶೌಚಾಲಯ, ಆವರಣ ಗೋಡೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಬರಲಿವೆ.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ವಾರ್ಡ್ಸದಸ್ಯ ಪ್ರೇಮಾನಂದ ಗುನಗಾ, ನಗರಸಭೆ ಸದಸ್ಯರು, ಪೌರಾಯುಕ್ತ ಆರ್. ಪಿ. ನಾಯ್ಕ ಹಾಗೂ ಇನ್ನಿತರು ಇದ್ದರು.