ಕಾರವಾರ: ಮಣ್ಣಿನಿಂದ ತಯಾರಿಸಲಾಗುವ ಗುಮ್ಮಟೆ ವಾದ್ಯವನ್ನು ಇಲ್ಲೊಬ್ಬರು ಮರದ ಒಂದೇ ಒಣಗಿದ ಸಣ್ಣ ದಿಮ್ಮಿಯನ್ನು ಬಳಸಿ ತಯಾರಿಸಿದ್ದು ವಿಶೇಷ ಗಮನ ಸೆಳೆಯುತ್ತಿದೆ.
ಅಮದಳ್ಳಿಯ ಜಾನಪದ ಕಲಾವಿದರು, ರೈತರೂ ಆಗಿರುವ ರಾಮಚಂದ್ರ ಬಂಟಾ ಗೌಡ ಅವರು ತಯಾರಿಸಿದ ಮರದ ಒಣತುಂಡಿನ ಗುಮ್ಮಟೆ ವಾದ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆ ವಿವಿಧ ಜನಾಂಗಗಳ ವಿವಿಧ ಪ್ರಕಾರದ ಜಾನಪದ ಕಲಾ ಪ್ರಕಾರಗಳ ತವರೂರು ಎಂದೇ ಗುರುತಿಸಿಕೊಂಡಿದೆ. ಇಂತಹ ಜನಾಂಗಗಳಲ್ಲಿ ಹಾಲಕ್ಕಿ ಬುಡಕಟ್ಟು ಜನಾಂಗವೂ ಒಂದು. ಹಾಲಕ್ಕಿಗಳಲ್ಲಿ ಮುಖ್ಯ ಜಾನಪದ ವಾದ್ಯವೆಂದರೆ ಅದು ಗುಮ್ಮಟೆ ಪಾಂಗ್. ಸುಗ್ಗಿ ಕುಣಿತ, ಗುಮ್ಮಟೆ ಹಾಡು ಸೇರಿದಂತೆ ವಿವಿಧ ಜಾನಪದ ಕಾರ್ಯಕ್ರಮಗಳಿಗೆ ಗುಮ್ಮಟೆ ಪಾಂಗ್ ಬಹು ಮುಖ್ಯ ವಾದ್ಯವಾಗಿದೆ.
ಮಡಕೆಯಂತೆಯೇ ಸುಮಾರು 4-5 ಅಡಿ ಉದ್ದವಾಗಿ ಮಣ್ಣಿನಲ್ಲಿ ತಯಾರಾಗಿರುವ ಈ ಗುಮ್ಮಟೆಯ ಒಂದು ಬದಿ ಚಿಕ್ಕ ಬಾಯಿ ಇದ್ದರೆ ಇನ್ನೊಂದೆಡೆ ದೊಡ್ಡ ಬಾಯಿ ಇರುತ್ತದೆ. ದೊಡ್ಡ ಬಾಯಿ ಇರುವೆಡೆ ವಾದ್ಯಕ್ಕೆ ಬಳಸುವ ಚರ್ಮವನ್ನು ಕಟ್ಟಿಕೊಂಡು ಬಾರಿಸಲಾಗುತ್ತದೆ. ಇದರಿಂದ ಹೊರಡುವ ನಾದವು ಸುಶ್ರಾವ್ಯವಾಗಿರುತ್ತದೆ. ಇದನ್ನು ಬಳಸಿ ಹಾಲಕ್ಕಿಗಳು ತಮ್ಮ ಗ್ರಾಮ್ಯ ಭಾಷೆಯಲ್ಲಿ ರಾಮಾಯಣ, ಮಹಾಭಾರತ ಮೊದಲಾದ ಕಥೆಯನ್ನಾಧರಿಸಿ ಗುಮಟೆ ಪಾಂಗ್ ಬಾರಿಸುವುದು ಹಾಲಕ್ಕಿ ಒಕ್ಕಲಿಗರ ಸಂಪ್ರದಾಯ ಇಂದಿಗೂ ಜೀವಂತ ಇದೆ.
ಮೊದಲಿನಿಂದಲೂ ಈ ವಾದ್ಯವನ್ನು ಮಣ್ಣಿನಿಂದಲೇ ತಯಾರಿಸುವುದು ಸಾಮಾನ್ಯವಾಗಿದ್ದದರೆ ಕೆಲವೊಮ್ಮೆ ಅನುಕೂಲಸ್ಥರು ತಾಮ್ರದ ಗುಮ್ಮಟೆಯನ್ನು ತಯಾರಿಸಿರುವುದೂ ಇದೆ. ಆದರೆ ಒಣ ಕಟ್ಟಿಗೆಯಿಂದ ತಯಾರಿಸಿರುವುದು ತೀರಾ ಕಡಿಮೆ. ಇದೀಗ ಇದೊಂದು ಸಾಹಸಕ್ಕೆ ಮುಂದಾದ ರಾಮಚಂದ್ರ ಗೌಡ ಅವರು ತಮಗೆ ದೊರೆತ ಉತ್ತಮವಾದ ಒಂದು ಮರದ ಒಣ ದಿಮ್ಮಿಯನ್ನು ಗುಮ್ಮಟೆ ತಯಾರಿಸಲು ಬಳಸಿಕೊಂಡಿದ್ದಾರೆ. ರೈತಾಪಿ ಕುಟುಂಬದವರಾದ ಇವರು ಹಾಲಕ್ಕಿಗಳ ಸುಗ್ಗಿ ಕುಣಿತ, ಗುಮ್ಮಟೆ ಹಾಡು, ಪಗಡೆ ಕುಣಿತ ಮುಂತಾದ ಜಾನಪದ ಕಲೆಗಳಲ್ಲೂ ನಿಸ್ಸೀಮರು.
ರಾಮಚಂದ್ರ ಗೌಡ ಮೂಲತಃ ಅಂಬೈಕೊಡಾರ ಮೂಲ ಮನೆ. ಹಲವು ವರ್ಷಗಳ ಹಿಂದೆ ನೌಕಾನೆಲೆಯಿಂದ ನಿರಾಶ್ರಿತರಾಗಿ ಸಂಪತ್ಭರಿತ ಕೃಷಿಭೂಮಿಯನ್ನು ಕಳೆದುಕೊಂಡು ಅಮದಳ್ಳಿಯಲ್ಲಿ ಅವರ ತಂದೆ ಖರೀದಿಸಿದ ಜಮೀನಿನಲ್ಲಿ ಮನೆ ಮಾಡಿ ಜೀವನ ನಡೆಸುತ್ತಿದ್ದಾರೆ. ಇಲ್ಲಿಯೂ ಅವರು ತಮ್ಮ ರೈತಾಪಿಯನ್ನು ಬಿಡದೆ ಬೇರೆಯವರ ಹೊಲ ಗೇಣಿಗೆ ಪಡೆದು ಜೀವನ ಸಾಗಿಸುತ್ತಿದ್ದಾರೆ. ಅಮದಳ್ಳಿಯ ಪ್ರಸಿದ್ಧ ಡಿಂಡಿ ಹಬ್ಬದ ಸ್ತಬ್ಧಚಿತ್ರಗಳ(ಹಗರಣ) ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಬೃಹತ್ ಗಾತ್ರದ ಆನೆ, ಹಡಗು ತಯಾರಿಸಿ ನೆರೆದವರನ್ನು ರಂಜಿಸುತ್ತಾರೆ.