ಮಂಗಳೂರು: ಮಂಗಳೂರು ನಗರದಲ್ಲಿ ಖಾಸಗಿ ಬಸ್ ಚಾಲಕರ ಧಾವಂತದ ವರ್ತನೆಗೆ ಕಡಿವಾಣವೇ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಎದುರಾಗಿದ್ದು, ಬೆಂದೂರ್ ವೆಲ್ ಸರ್ಕಲ್ ಬಳಿ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಪಾದಚಾರಿ ಮಹಿಳೆ ಮೇಲೆ ಬಸ್ ಹರಿದು ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಚಾಲಕ ಬಸ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಸಿಸಿಟಿವಿ ಫೂಟೇಜ್ ಸಹಾಯದಿಂದ ಹುಡುಕಾಟ ನಡೆಸಲಾಗುತ್ತಿದೆ. ಮೃತಪಟ್ಟ ಮಹಿಳೆ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಸಂಚಾರಿ ಎಸಿಪಿ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಸ್ಕೂಟಿಯಲ್ಲಿ ಸಾಗುತ್ತಿದ್ದ ತಾಯಿ, ಮಗು ಮೇಲೆ ಬಸ್ ತಾಗಿದ ಪರಿಣಾಮ ಇದೇ ಸ್ಥಳದಲ್ಲಿ ಮಗು ಮೃತಪಟ್ಟ ಘಟನೆ ನಡೆದಿತ್ತು.