ಮಂಗಳೂರು: ಇದೀಗ ಪ್ರಧಾನಿ ಮೋದಿಯವರ ಅಧಿಕೃತ ಸರಕಾರಿ ಕಾರ್ಯಕ್ರಮ ಸೆ.2ಕ್ಕೆ ನಿಗದಿಯಾಗಿದ್ದು, ನವಮಂಗಳೂರು ಬಂದರು ಪ್ರಾಧಿಕಾರ(ಎನ್ಎಂಪಿಎ)ದಲ್ಲಿ1,200 ಕೋಟಿ ರೂ. ವೆಚ್ಚದ ಕಾಮಗಾರಿಗಳ ಲೋಕಾರ್ಪಣೆ, ಸಾಗರಮಾಲಾ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಂದು ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ದೇಶದ ಪ್ರಥಮ ಸ್ವದೇಶಿ ನಿರ್ಮಿತ ವಿಕ್ರಾಂತ್ ಯುದ್ಧವಾಹಕ ನೌಕೆ ಲೋಕಾರ್ಪಣೆಗೊಳಿಸಿ, ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಎನ್ಎಂಪಿಟಿ ಉದ್ಘಾಟನೆ ಮಾಡಿ ಹೋದ ಬಳಿಕ ಬರೋಬ್ಬರಿ 47 ವರ್ಷ ಬಳಿಕ ಪ್ರಧಾನಿಯೊಬ್ಬರು ಅಧಿಕೃತ ಸರಕಾರಿ ಕಾರ್ಯಕ್ರಮ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಪ್ರಧಾನಿಯಾಗಿ ನರೇಂದ್ರ ಮೋದಿ ಚುನಾವಣಾ ಪ್ರಚಾರ, ಉಡುಪಿಯಲ್ಲಿ ಧರ್ಮ ಸಂಸತ್, ಉಜಿರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ, ಲಕ್ಷದ್ವೀಪ ಭೇಟಿ ವೇಳೆ ಮಂಗಳೂರಿನಲ್ಲಿ ವಾಸ್ತವ್ಯ, ಕೇರಳ ಚುನಾವಣಾ ಪ್ರಚಾರ ಸಂದರ್ಭ ಬಂದಿದ್ದರೂ, ಅಧಿಕೃತ ಸರಕಾರಿ ಕಾರ್ಯಕ್ರಮವಿರಲಿಲ್ಲ.
ಇದೀಗ ಪ್ರಧಾನಿ ಮೋದಿಯವರ ಅಧಿಕೃತ ಸರಕಾರಿ ಕಾರ್ಯಕ್ರಮ ಸೆ.2ಕ್ಕೆ ನಿಗದಿಯಾಗಿದ್ದು, ನವಮಂಗಳೂರು ಬಂದರು ಪ್ರಾಧಿಕಾರ(ಎನ್ಎಂಪಿಎ)ದಲ್ಲಿ1,200 ಕೋಟಿ ರೂ. ವೆಚ್ಚದ ಕಾಮಗಾರಿಗಳ ಲೋಕಾರ್ಪಣೆ, ಸಾಗರಮಾಲಾ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಅಂದು ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ದೇಶದ ಪ್ರಥಮ ಸ್ವದೇಶಿ ನಿರ್ಮಿತ ವಿಕ್ರಾಂತ್ ಯುದ್ಧವಾಹಕ ನೌಕೆ ಲೋಕಾರ್ಪಣೆಗೊಳಿಸಿ, ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ನವಮಂಗಳೂರು ಬಂದರಿಗೆ ತೆರಳಿ, ಕಾರ್ಯಕ್ರಮ ಮುಗಿಸಿ ಕೂಳೂರಿನ ಗೋಲ್ಡ್ಫಿಂಚ್ ಸಿಟಿ ಮೈದಾನದಲ್ಲಿ ಸಾರ್ವಜನಿಕ ಸಭೆ, ಬಳಿಕ ಮಂಗಳೂರು ವಿಮಾನ ನಿಲ್ದಾಣ ಮೂಲಕ ಹೊಸದಿಲ್ಲಿಗೆ ನಿರ್ಗಮಿಸುವ ಕಾರ್ಯಕ್ರಮವಿದ್ದು, ಅಧಿಕೃತ ಪ್ರವಾಸ ಕಾರ್ಯಕ್ರಮ ಇನ್ನಷ್ಟೇ ಬರಬೇಕಿದೆ.
ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ 1951ರ ಡಿ.25ರಂದು ಬಜಪೆ ವಿಮಾನ ನಿಲ್ದಾಣ ಮತ್ತು ಮಂಗಳೂರಿನಲ್ಲಿ ನೆಹರೂ ಮೈದಾನದ ಪೆವಿಲಿಯನ್ ಉದ್ಘಾಟನೆಗೆ ಆಗಮಿಸಿದ್ದರು. ಬಳಿಕ ಎರಡು ಬಾರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ರೈಲಿನಲ್ಲಿ ಕೇರಳಕ್ಕೆ ತೆರಳಿದ್ದರು
ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ 1963ರಲ್ಲಿ ನವಮಂಗಳೂರು ಬಂದರು ಮಂಡಳಿಯ ಶಿಲಾನ್ಯಾಸ ಮತ್ತು ಎನ್ಐಟಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನವಮಂಗಳೂರು ಬಂದರು ಮಂಡಳಿ 1974ರ ಮೇ 4ರಂದು ಕಾರ್ಯಾರಂಭ ಮಾಡಿದ್ದು, ಪ್ರಧಾನಿ ಇಂದಿರಾ ಗಾಂಧಿ 1975ರ ಮೇ 4ರಂದು ಮಂಗಳೂರಿಗೆ ಆಗಮಿಸಿ, ಉದ್ಘಾಟಿಸಿದ್ದರು.
ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಒಮ್ಮೆ ರಜೆಯಲ್ಲಿ ಬಜಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಬಳಿಕ ಅಂಡಮಾನ್ಗೆ ತೆರಳಿದ್ದರು. 1990ರ ವೇಳೆಗೆ ಪಿ.ವಿ. ನರಸಿಂಹರ ರಾವ್ ಕುಂದಾಪುರ ತಾಲೂಕಿನಲ್ಲಿ ವಾರಾಹಿ ಪ್ರಥಮ ಹಂತದ ಯೋಜನೆ ಉದ್ಘಾಟನೆಗೆ ಆಗಮಿಸಿದ್ದರು. ನಂತರ ದ.ಕ.ಕ್ಕೆ ಸಾರ್ವಜನಿಕ ಸಭೆಗೆ ಆಗಮಿಸಿದ್ದರು.
ಮೊರಾರ್ಜಿ ದೇಸಾಯಿ, ಎಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್, ಚಂದ್ರಶೇಖರ್ ಖಾಸಗಿ ಕಾರ್ಯಕ್ರಮ ಪ್ರಯುಕ್ತ ದ.ಕ. ಜಿಲ್ಲೆಗೆ ಆಗಮಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಒಮ್ಮೆ ಹಂಗಾಮಿ ಪ್ರಧಾನಿಯಾಗಿ ಮಂಗಳೂರಿಗೆ, 2000ದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
2006ರಲ್ಲಿ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಂದ 4,900 ಕೋಟಿ ರೂ. ವೆಚ್ಚದಲ್ಲಿ ಒಎನ್ಜಿಸಿಯ ಅರೇಮೆಟಿಕ್ಸ್(ಪೆಟ್ರೋಕೆಮಿಕಲ್) ಕಾಂಪ್ಲೆಕ್ಸ್ ಉದ್ಘಾಟನೆಗೆ ಸಿದ್ಧತೆ ನಡೆಸಿದ್ದರೂ, ಪ್ರತಿಕೂಲ ಹವಾಮಾನದಿಂದ ವಿಮಾನ ಇಳಿಯದೆ, ದಿಲ್ಲಿಗೆ ಮರಳಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಕಾರ್ಯಕ್ರಮದ ಜತೆಗೆ ಪಕ್ಷದ ಸಾರ್ವಜನಿಕ ಸಭೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.