ಸುಳ್ಯ: ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಬೆಳಕು ಕಾಣದ ಊರು ಇದೆ ಅಂದ್ರೆ ನೀವು ನಂಬ್ಲೇಬೇಕು. ಈ ಊರಿಗೆ ಜನಸಂಚಾರವಿಲ್ಲ. ಈ ಊರಿಗೆ ಹೋಗಬೇಕೆಂದ್ರೆ ಕಾಡು ಪ್ರಾಣಿಗಳ ದರ್ಶನ ನೋಡಿಕೊಂಡೇ ಹೋಗಬೇಕು. ಸ್ವಾತಂತ್ರ್ಯ ಕಳೆದು ಇಷ್ಟು ವರ್ಷಗಳಾದರೂ ಕನಿಷ್ಠ ಮೂಲಭೂತ ಸೌಕರ್ಯಗಳಿಗೆ ಅಲೆದಾಡುವ ಇಲ್ಲಿನ ಜನರನ್ನು ನೋಡುವಾಗ ನಿಜಕ್ಕೂ ನಾಗರಿಕ ಸಮಾಜಕ್ಕೆ, ಆಳುವ ವರ್ಗಕ್ಕೆ ನಾಚಿಕೆಯಾಗ್ಬೇಕು. ಹೇಳಿಕೇಳಿ ಮೀಸಲು ಕ್ಷೇತ್ರವಾಗಿರುವ ಸುಳ್ಯದಲ್ಲಿ ಇಂತಹಾ ಪರಿಸ್ಥಿತಿ ಇದೆಯೆಂದರೆ ಮೀಸಲಾತಿ ಇರೋದು ವೇಸ್ಟ್ ಅನ್ನಿಸುತ್ತದೆ . ದಲಿತರ ಉದ್ದಾರಕ್ಕೆಂದೇ ಮೀಸಲಾತಿ ತಂದ್ರೂ ಈ ಊರಿನ ದಲಿತರು ಹಾಗೂ ಪರಿಶಿಷ್ಟ ವರ್ಗದ ಜನ ಇನ್ನೂ ಪರಿತಪಿಸುತ್ತಲೇ ಇರುವುದು ದುರದೃಷ್ಟಕರ.
ಇದು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಬಟ್ಟಂಗಾಯ ಊರು. ಹೆಸರಿಗಷ್ಟೇ ಈ ಊರು ಸುಳ್ಯದ ವ್ಯಾಪ್ತಿಯಲ್ಲಿದ್ದರೂ ಈ ಜನರ ವ್ಯವಹಾರ, ಕಾರ್ಯಗಳೆಲ್ಲಾ ಪಕ್ಕದ ರಾಜ್ಯ ಕೇರಳದ ಊರುಗಳಲ್ಲಿ. ಇದಕ್ಕೆ ಕಾರಣ ತಾಲೂಕು ಕೇಂದ್ರಕ್ಕೆ ಬರಲು ಸಾಧ್ಯವಾಗದಿರುವುದು.
ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತ ಪರಿಸ್ಥಿತಿ ಇಲ್ಲಿನ ಜನರದ್ದು. ಸುಮಾರು 6 ರಿಂದ 7 ಮನೆಗಳು ಇಲ್ಲಿವೆ. ಇಲ್ಲಿ ವಾಸಿಸುವ ಕುಟುಂಬಗಳದ್ದು ಹಲವಾರು ಸಮಸ್ಯೆ. ಸರ್ಕಾರದ ಉಚಿತ ರೇಷನ್ ಗಾಗಿಯೂ ಮೂರು ಸಾವಿರದಷ್ಟು ಖರ್ಚು ಮಾಡಬೇಕಾದ ದುರಂತ ಈ ಜನರದ್ದು. ಶಾಲೆ, ಆಸ್ಪತ್ರೆ, ಕೋರ್ಟ್ ಕಚೇರಿ ದೂರದ ಮಾತೇ ಸರಿ. ಕಾಡುಪ್ರಾಣಿಗಳೇ ಇವರ ಒಡನಾಡಿಗಳು. ಪ್ರತಿದಿನ ಜೀವ ಕೈಲಿ ಹಿಡಿದು ಬದುಕುವ ಪರಿಸ್ಥಿತಿ ಈ ಗ್ರಾಮವಾಸಿಗಳದ್ದು.
ಮಳೆಗಾಲ ಬಂತೆಂದರೆ ಇವರ ಕಥೆ ಯಾತನಾಮಯ. ಆರು ತಿಂಗಳಿಗೆ ಬೇಕಾದ ಆಹಾರ ಸಾಮಾಗ್ರಿ ತಂದಿಟ್ಟು, ಹೊರ ಊರಿನ ಸಂಪರ್ಕ ಕಡಿದು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತೆ. ಇದೇ ಕಾರಣದಿಂದ ಇಲ್ಲಿನ ಮಕ್ಕಳನ್ನು ಬೇರೆಡೆ ವರ್ಗಾಯಿಸಿ ಶಿಕ್ಷಣ ನೀಡ್ತಾರೆ.
ಈ ಬಟ್ಟಂಗಾಯಕ್ಕೆ ತೆರಳಲು ಕಾಡು ದಾರಿಯಲ್ಲೇ ಸಾಗಬೇಕು. ನಡುವೆ ಆನೆ ಮುಂತಾದ ಕಾಡುಪ್ರಾಣಿಗಳು ಎದುರಾದರೆ ಕಥೆ ಮುಗಿದಂತೆ. ಊರ ನಡುವೆ ಸಂಪರ್ಕ ಕಡಿಯುವ ಹೊಳೆ ಇವರ ಪಾಲಿಗೆ ಯಮಕಿಂಕರ. ಇದಕ್ಕೊಂದು ಸೇತುವೆ ನಿರ್ಮಿಸಿಕೊಡಿ ಎಂದರೆ ಕೇಳುವವರಿಲ್ಲ. ರಸ್ತೆ ,ವಿದ್ಯುತ್ ಸಂಪರ್ಕ ಕನಸಿನ ಮಾತು.
ಇಷ್ಟೆಲ್ಲಾ ಸಮಸ್ಯೆ ಇದ್ದರೂ ಜನಪ್ರತಿನಿಧಿಗಳು ಈ ಭಾಗದತ್ತ ಸುಳಿಯುವುದಿಲ್ಲ. ಪಂಚಾಯತ್ ಮಟ್ಟದಲ್ಲಿನ ಸಣ್ಣಪುಟ್ಟ ಕೆಲಸಗಳನ್ನು ಪಂಚಾಯತ್ ಸದಸ್ಯರು ಮಾಡಿಕೊಡುವುದು ಬಿಟ್ಟರೆ ಉಳಿದವರಾರೂ ಈ ಕಡೆ ತಲೆ ಹಾಕಿಯೂ ಮಲಗಿದವರಲ್ಲ. ಇದೇ ಕಾರಣದಿಂದ ಈ ಊರಿನ ಅಷ್ಟೂ ಜನ ಮತ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.