ಸುರತ್ಕಲ್: ಇಲ್ಲಿನ ಹಿಂದೂ ವಿದ್ಯಾದಾಯಿನಿ ಶಾಲೆ ಮುಂಭಾಗದ ಹೆದ್ದಾರಿಯಲ್ಲಿನ ಅಂಡರ್ ಪಾಸ್ ಮಳೆಯ ನೀರಿಗೆ ಮುಳುಗಡೆಯಾಗಿದ್ದು ಪ್ರವಾಹ ಸ್ಥಿತಿ ತಲೆದೋರಿದೆ. ಇದರಿಂದ ಶಾಲಾ ಮಕ್ಕಳ ಪೋಷಕರು, ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಅಂಡರ್ ಪಾಸ್ ಅನ್ನು ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಮಕ್ಕಳಿಗೆ ರಸ್ತೆ ದಾಟಲು ಸುಲಭವಾಗಲೆಂದು ನಿರ್ಮಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಇಲ್ಲಿ ಮಂಗಳಮುಖಿಯರು ಬಿಂದಾಸ್ ಆಗಿ ವೇಶ್ಯಾವಾಟಿಕೆ ನಡೆಸುತ್ತಿದ್ದು ಲಾರಿ ಚಾಲಕರು ಅಕ್ರಮ ದಂಧೆಯಲ್ಲಿ ತೊಡಗುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಕಾಂಡೋಮ್, ಮದ್ಯದ ಬಾಟಲಿಗಳು ಪತ್ತೆಯಾಗಿತ್ತು.
ಆನಂತರ ಅಂಡರ್ ಪಾಸನ್ನು ಮಕ್ಕಳ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದರು. ಈಗ ಮಳೆಗೆ ನೀರು ನಿಂತು ಅಪಾಯದ ಕರೆಗಂಟೆ ಬಾರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡಿಲ್ಲ.
ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಅಂಡರ್ ಪಾಸ್ ಮೂಲಕ ಹೋಗಬೇಕಿದೆ. ಆದರೆ ಕೆಲದಿನಗಳಿಂದ ಸುರಿದ ಮಳೆಗೆ ಅಂಡರ್ ಪಾಸ್ ದಾರಿಯಲ್ಲಿ ನೀರು ತುಂಬಿಕೊಂಡಿದ್ದು ಇನ್ನೊಂದು ಕಡೆಗೆ ದಾಟಲಾಗುತ್ತಿಲ್ಲ.
ಮಕ್ಕಳಂತೂ ಇದರ ಒಳಗಡೆ ಹೋಗಲು ಭಯಪಡುತ್ತಿದ್ದಾರೆ. ಅಲ್ಲದೇ ಇದರ ಒಳಗಡೆ ಪೂರ್ತಿ ಕತ್ತಲು ತುಂಬಿಕೊಂಡಿದೆ. ವಿದ್ಯುತ್ ಬೆಳಕಿನ ವ್ಯವಸ್ಥೆ ಕೂಡಾ ಇಲ್ಲ. ಒಂದು ವೇಳೆ ಸುಲಭದ ದಾರಿ ಎಂದು ರಸ್ತೆ ಮೇಲ್ಭಾಗದಿಂದ ದಾಟಿದರೆ ಅಪಾಯ ಗ್ಯಾರಂಟಿ. ಇನ್ನಾದರೂ ಅಧಿಕಾರಿಗಳು ಗಮನಹರಿಸಬೇಕು ಅನ್ನುತ್ತಾರೆ ಪೋಷಕರು.