ಮಂಗಳೂರು: ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಯಿತು, ಮಂಗಳೂರಿನ ಪುರಭವನ ಬಳಿಯ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಭಾಗಿಯಾಗಿದ್ದರು.
ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಜಿಹಾದಿಗಳು ತಲೆ ಎತ್ತಿದ್ದಾರೆ. ರಾಜ್ಯದಲ್ಲಿ ಜಿಹಾದಿ ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ಸಂಶಯ ಮೂಡುತ್ತಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ವಿರೋಧಿ ನೀತಿ ಹೆಚ್ಚಾಗಿದೆ. ಸಿದ್ದರಾಮಯ್ಯ ಭಯೋತ್ಪಾದಕರ ಪರ ಮತ್ತು ರಾಷ್ಟ್ರ ವಿರೋಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಜೈನ ಮುನಿಗಳ ಹತ್ಯೆಯಾಗುತ್ತಿದೆ. ಕೂಲಿ ಕಾರ್ಮಿಕರ ಹತ್ಯೆಯಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಒಮ್ಮೆ ಕೇರಳ ಫೈಲ್ಸ್ ಸಿನಿಮಾ ವೀಕ್ಷಿಸಬೇಕು. ಕೇರಳ ಫೈಲ್ಸ್ ಸಿನಿಮಾವೇ ಉಡುಪಿಯಲ್ಲಿ ನಡೆದಿದೆ. ಆದರೆ ಕಾಂಗ್ರೆಸ್ ಪಕ್ಷ ಅದನ್ನು ಮಕ್ಕಳಾಟ ಎಂದು ಹೇಳುತ್ತಿದೆ. ಪೊಲೀಸ್ ಇಲಾಖೆ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಇದು ಷಂಡತನದ, ನಿರ್ವೀರ್ಯ ಸರ್ಕಾರ. ಬಿಜೆಪಿ ಸರ್ಕಾರ ತಾಕತ್ತು ಪ್ರದರ್ಶಿಸಿ ಪಿಎಫ್ ಐ ನಿಷೇಧಿಸಿತ್ತು.
ಈಗ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಜಿಹಾದಿಗಳ ಜೊತೆ ಕೈ ಜೋಡಿಸಿದ್ದಾರೆ. ಉಡುಪಿ ಮೊಬೈಲ್ ವಿಡಿಯೋ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ನಡೆಯುತ್ತಿದೆ. ಮತಾಂತರ ನಿಷೇಧ ಕಾಯ್ದೆ ರದ್ದು, ಪಠ್ಯದಲ್ಲಿ ಸಾವರ್ಕರ್ ಹೆಸರು ತೆಗೆಯಲು ಯತ್ನಿಸಿ ಕಾಂಗ್ರೆಸ್ ರಾಷ್ಟ್ರ ವಿರೋಧಿಯಾಗಿದೆ. ನಮ್ಮ ಕಾರ್ಯಕರ್ತೆಯನ್ನ ಟ್ವೀಟ್ ಮಾಡಿದ ಕಾರಣಕ್ಕೆ ಜೈಲಿಗೆ ಹಾಕುತ್ತಾರೆ. ಆದರೆ ಜಿಹಾದಿಗಳ ವಿಡಿಯೋ ಮಾಡಿದವರು ಹಾಗೂ ಹತ್ಯೆ ಮಾಡಿದವರನ್ನು ಜೈಲಿಗೆ ಹಾಕೋ ತಾಕತ್ತು ಸಿದ್ದರಾಮಯ್ಯ ಅವರಿಗೆ ಇಲ್ಲ. ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಭಯ ಆರಂಭವಾಗಿದೆ.
ಕಾಂಗ್ರೆಸ್ ಗೆದ್ದಾಗಲೇ ಪಾಕಿಸ್ತಾನ ಪರ ಜಯಘೋಷವಾಗಿದೆ. ಆದರೆ ಇದುವರೆಗೆ ಅವರನ್ನು ಜೈಲಿಗೆ ಹಾಕಲು ಸಿದ್ದರಾಮಯ್ಯಗೆ ಸಾಧ್ಯವಾಗಿಲ್ಲ. ಮಂಗಳೂರು ಕುಕ್ಕರ್ ಬ್ಲಾಸ್ಟ್ ನಡೆದ ವೇಳೆ ಡಿಕೆಶಿ ಆರೋಪಿಗಳನ್ನು ನಮ್ಮ ಬ್ರದರ್ಸ್ ಎಂದಿದ್ದರು. ಆದರೆ ಎನ್ಐಎ ತನಿಖೆಯಲ್ಲೇ ಅವರು ಭಯೋತ್ಪಾದಕರು ಎಂಬುದು ಬಹಿರಂಗವಾಗಿದೆ. ಮೂಡಬಿದಿರೆಯಲ್ಲಿ ಪಂಚಾಯತ್ ಕಟ್ಟಡ ಉದ್ಘಾಟನೆಗೆ ಪ್ರಿಯಾಂಕ್ ಖರ್ಗೆ ಕರೆದಿಲ್ಲ ಅಂತ ಕಾರ್ಯಕ್ರಮ ರದ್ದು ಮಾಡಲಾಗಿದೆ. ಅಲ್ಲಿನ ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ. ಪ್ರೋಟೋಕಾಲ್ ಪ್ರಕಾರ ಉಸ್ತುವಾರಿ ಸಚಿವರು, ಶಾಸಕರ ಹೆಸರು ಹಾಕಲಾಗಿದೆ. ಆದರೆ ಪ್ರಿಯಾಂಕ್ ಖರ್ಗೆ ಹೆಸರು ಹಾಕಿಲ್ಲ ಅಂತ ಕಾರ್ಯಕ್ರಮ ರದ್ದಾಗಿದೆ. ಈ ವಿಚಾರದಲ್ಲಿ ನಾನು ಶಾಸಕ ಉಮಾನಾಥ್ ಹೀಗೆ ಹೇಳ ಬಯಸುತ್ತೇನೆ. ನೀವು ಹೋಗಿ ಉದ್ಘಾಟನೆ ಮಾಡಿ, ತಾಕತ್ತು ಇದ್ರೆ ಅವರು ನಿಮ್ಮನ್ನ ಅಮಾನತು ಮಾಡಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯಗೆ ಕೇಸರ ಟೋಪಿಯೇಕೆ ಬೇಡ: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸಿದ್ದರಾಮಯ್ಯ ಎಲ್ಲಾ ಟೋಪಿ ಹಾಕುತ್ತಾರೆ. ಆದರೆ ಕೇಸರಿ ಟೋಪಿ ಯಾಕೆ ಬೇಡ ಅಂದ್ರಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸರಕಾರದಲ್ಲಿ ಎಲ್ಲರು ಸಮಾನರು ಆದ್ರೆ ಹಿಂದೂಗಳು ಕಡಿಮೆ ಸಮಾನರಾ..? ಉಡುಪಿ ಫೈಲ್ಸ್ ಒಂದು ದಿನದ ಘಟನೆಯಲ್ಲ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿದೆ. ಮುಖ್ಯಮಂತ್ರಿ ಗೃಹ ಮಂತ್ರಿಗಳು ತಕ್ಷಣ ಇದನ್ನ ತನಿಖೆ ಮಾಡಿಸಬೇಕು. ಗೃಹ ಮಂತ್ರಿಗಳು ಇದು ತಮಾಷೆಗೆ ಮಾಡಿದ್ದು ಅಂತ ಹೇಳುತ್ತಾರೆ. ಈಗ ಬೆಳ್ಳಿಯಪ್ಪ ತನಿಖಾಧಿಕಾರಿಯಾಗಿದ್ದಾರೆ. ಅವರ ಮೇಲೆ ಸಂಶಯವಿಲ್ಲ. ಆದರೆ ಸರಕಾರದ ಮೇಲೇ ಸಂಶಯವಿದೆ. ಭಯೋತ್ಪಾದನೆಗೆ ಬೆಂಬಲ ಕೊಡುತ್ತಿರುವ ಸರಕಾರವೆಂದರೇ ಅದು ಕಾಂಗ್ರೆಸ್ ಸರಕಾರ ಎಂದರು.
ಸಿದ್ದರಾಮಯ್ಯ ನಾಳೆ ಉಡುಪಿಗೆ ಬರುತ್ತಿದ್ದಾರೆ. ಈ ವೇಳೆ ಪ್ರಕರಣವನ್ನ ಎಸ್ ಐಟಿ ಒಪ್ಪಿಸುತ್ತೇನೆ ಎಂದು ಹೇಳಿದರೇ ನಾವು ಸ್ವಾಗತಿಸುತ್ತೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮನೆಯಿಂದ ಹೊರಗೆ ಹೋದ ಹುಡುಗಿ ವಾಪಸ್ ಬರ್ತಾಳೆ ಎಂಬ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.