ಮಂಗಳೂರು: ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೃಪಾಕಟಾಕ್ಷದಡಿಯಲ್ಲೇ ಬಿಜೆಪಿ ಸರಕಾರದ ವ್ಯಾಪಕ
ಭ್ರಷ್ಟಾಚಾರ ನಡೆದಿದೆ ಎಂದು ಎಐಸಿಸಿ ವಕ್ತಾರ ಚರಣ್ಸಿಂಗ್ ಸಪ್ನಾಲ್ ಅವರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ
ಬಿಜೆಪಿ ಆಡಳಿತದಲ್ಲಿ ಟೆಂಡರ್ ಹಗರಣ, ಪಿಎಸ್ಐ ನೇಮಕಾತಿ ಹಗರಣ, ಭೂ ಹಗರಣ,ಕೋವಿಡ್ ಹಗರಣ, ಬಿಟ್ಕಾಯಿನ್ ಹಗರಣ ಸೇರಿದಂತೆ ಹಲವಾರು ಹಗರಣಗಳು ನಡೆದಿವೆ. ಕರ್ನಾಟಕದ ಬಿಜೆಪಿ ಸರಕಾರ ಶೇ.40 ಕಮಿಷನ್ ಸರಕಾರವೆಂದೇ ದೇಶದಲ್ಲಿ ಕುಖ್ಯಾತಿಯನ್ನು ಪಡೆದಿದೆ.
ಆದರೆ ಪ್ರಧಾನಿ ನರೇಂದ್ರ ಮೋದಿಯವರು ಇದರ ಬಗ್ಗೆ ಯಾವುದೇ ಚಕಾರವೆತ್ತಿಲ್ಲ. ಬಿಜೆಪಿ ಎಂದರೆ ಭ್ರಷ್ಟಚಾರಿ ಜನತಾ ಪಕ್ಷ ಎಂದು ಆರೋಪಿಸಿದರು.
ನರೇಂದ್ರ ಮೋದಿಯವರು ಕೆ.ಎಸ್.ಈಶ್ವರಪ್ಪ ಅವರಿಗೆ ಕರೆ ಮಾಡಿ ಶ್ಲಾಘನೆ ವ್ಯಕ್ತಪಡಿಸಿರುವ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈಶ್ವರಪ್ಪ ಅವರ ಮೇಲೆ ಅವರದ್ದೇ ಪಕ್ಷದ ಕಾರ್ಯಕರ್ತ ಸಂತೋಷ್ ಎಂಬವರು ಭ್ರಷ್ಟಚಾರದ ಆರೋಪ ಮಾಡಿ ಸಾವಿಗೆ ಶರಣಾಗಿದ್ದರು. ಮೋದಿಯವರು ಆಗ ಸಂತೋಷ್ ಕುಟುಂಬಕ್ಕೆ ಕರೆ ಮಾಡಿ ಸಾಂತ್ವಾನ ಹೇಳುವ ಕೆಲಸ ಮಾಡಲಿಲ್ಲ. ಮೋದಿಯವರ ನಡೆ ಭ್ರಷ್ಟಚಾರಕ್ಕೆ ಅಧಿಕೃತ ಮುದ್ರೆಯೊತ್ತಿದಂತೆ ಆಗಿದೆ ಎಂದವರು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮೂಡುಬಿದಿರೆ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ, ಮುಖಂಡರಾದ ಎ.ಸಿ.ವಿನಯರಾಜ್, ಸಂತೋಷ್ ಕುಮಾರ್ ಶೆಟ್ಟಿ, ನೀರಜ್ಪಾಲ್,ವಸಂತ ಬೆನಾರ್ಡ್,ಶುಬೋಧಯ ಆಳ್ವ, ಶಾಲೆಟ್ ಪಿಂಟೋ ಉಪಸ್ಥಿತರಿದ್ದರು.