ಕಾಪು: ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಶುಕ್ರವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಳಕ್ಕೆ ಭೇಟಿ ನೀಡಿ ಮಾರಿಯಮ್ಮನ ದರುಶನ ಪಡೆದು ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಮಕ್ಕಳು ಅಮ್ಮನ ಸೇವೆಯನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ಕಾಪುವಿನ ಅಮ್ಮನ ಮಕ್ಕಳನ್ನು ಕಂಡು ಅರಿತುಕೊಳ್ಳಬೇಕು “ಇದಂ ಪ್ರಥಮತಃ” ಎಂಬಂತೆ ಈ ಪರಿಯ ನೂತನವಾದ ಮಂದಿರವನ್ನು ನಾವೆಲ್ಲೂ ಕೂಡಾ ಕಂಡಿಲ್ಲ, ತಾಯಿಯ ಭಕ್ತರೂ ದೇಶ ವಿದೇಶಗಳಿಂದ ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸುತ್ತಿರುವುದು ವಿಶೇಷವಾಗಿದೆ. ನಿಗದಿತ ಸಮಯದಲ್ಲಿ ಎಲ್ಲಾ ಕಾರ್ಯಗಳು ಮುಗಿಯಲಿ ಮತ್ತು ಭಕ್ತರ ಕಷ್ಟಕಾರ್ಪಣ್ಯಗಳು ದೂರವಾಗಿ ಮನೋಭಿಲಾಷೆ ಫಲಿಸಲಿ ಎಂದು ಆಶಿಸುತ್ತೇವೆ.
ಅಭಿವೃದ್ಧಿ ಸಮಿತಿಯಲ್ಲಿ ಇನ್ನೂ ಅನೇಕ ಕಾರ್ಯಗಳು ನಡೆಯಲಿಕ್ಕಿವೆ ಬಹುದೊಡ್ಡ ಕನಸನ್ನು ನೀವೆಲ್ಲ ಹೊತ್ತಿದ್ದೀರಿ, ನಾಡಿನ ಮೂಲೆ ಮೂಲೆಯಿಂದ ತಾಯಿಯ ದೇವಳ ನಿರ್ಮಾಣಕ್ಕೆ ಸೇವೆಗಳು ಹರಿದು ಬರಲಿ. ಎಲ್ಲರಿಗೂ ತಾಯಿಯ ಆಶೀರ್ವಾದವಿರಲಿ ಎಂದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಮತ್ತು ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಮತ್ತಿತರರು ಉಪಸ್ಥಿತರಿದ್ದರು.