ಮಂಗಳೂರು: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನಾಚರಣೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ವೈದ್ಯಕೀಯ ಅಧೀಕ್ಷಕರಾದ ಡಾ. ಹಬೀಬ್ ರೆಹಮಾನ್ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಪ್ರಭಾ ಅಧಿಕಾರಿ ಹಿರಿಯ ನಾಗರಿಕರು ಯಾವ ರೀತಿಯ ಜೀವನ ಶೈಲಿ ನಡೆಸಬೇಕು, ಯಾವೆಲ್ಲಾ ಆಹಾರ ಸೇವನಾ ಪದ್ದತಿಯನ್ನು ಅನುಸರಿಸಬೇಕು, ಜೀವನದ ಸಂಧ್ಯಾ ಕಾಲದಲ್ಲಿ ಯಾವ ರೀತಿ ಚಟುವಟಿಕೆಗಳಲ್ಲಿ ತೊಡಗಿರಬೇಕೆಂದು ಪ್ರಾತ್ಯಕ್ಷಿಕೆ ಮುಖೇನ ವಿವರಿಸಿದರು.
ಶಿಶು ಮತ್ತು ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ರಮಾನಾಥ ಮಹಾಲೆ, ಸಾಮಾನ್ಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಾಲಚಂದ್ರ ಭಟ್ ಅವರುಗಳು ವಿಶ್ವ ಆರೋಗ್ಯ ದಿನಾಚರಣೆ ಮತ್ತು ಇದರ ಮಹತ್ವ, ಸರಿಯಾದ ಆರೋಗ್ಯವಂತ ಜೀವನ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವಿದ್ಯಾರ್ಥಿವೈದ್ಯರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ದಾದಿಯರ ಮುಖ್ಯ ಅಧಿಕಾರಿ ಪ್ರೊಫೆಸರ್ ಬ್ರಿಡ್ಜೆಟ್ ಡಿ ಸಿಲ್ವಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಸ್ಪತ್ರೆಯ ಮಾರುಕಟ್ಟೆ ವಿಭಾಗವು ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಸೀನಿಯರ್ ಮಾರ್ಕೆಟಿಂಗ್ ಎಕ್ಸೆಕ್ಯೂಟಿವ್ ವಿಜಯಾನಂದ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಇದರೊಂದಿಗೆ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಉಚಿತ ಮಧುಮೇಹ ತಪಾಸಣೆ, ಎಲುಬು ಕ್ಯಾಲ್ಸಿಯಂ ಸಾಂದ್ರತೆ ಪರೀಕ್ಷೆ ಮತ್ತು ರಕ್ತದೊತ್ತಡ ತಪಾಸಣೆಗಳನ್ನು ನಡೆಸಲಾಯಿತು.