ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಾಟಿ ಆರಂಭದ ಭಾಗವಾದ ಮಠದ ಮಜಲು ರಸ್ತೆ ಬದಿಯ ಸರಕಾರಿ ಜಾಗದಲ್ಲಿ ಕಾಣಿಸಿಕೊಂಡ ಬೆಂಕಿಯು ಚಾರ್ಮಾಡಿ- ಕನಪಾಡಿ ರಕ್ಷಿತಾರಣ್ಯಕ್ಕೆ ನುಗ್ಗಿದ ಘಟನೆ ಗುರುವಾರ ರಾತ್ರಿ 11.45 ರ ಸುಮಾರಿಗೆ ಜರಗಿದೆ.
ರಸ್ತೆ ಬದಿ ಹಾಗೂ ಅರಣ್ಯದ ಸುಮಾರು 2 ಎಕರೆಗಿಂತ ಅಧಿಕ ಸ್ಥಳ ಬೆಂಕಿಯಿಂದ ಹಾನಿಗೊಳದಾಗಿದೆ. ಅರಣ್ಯ ಇಲಾಖೆಯ ಡಿ ಆರ್ ಎಫ್ ಓ ರವೀಂದ್ರ ಅಂಕಲಗಿ, ಸಿಬ್ಬಂದಿ ರಾಜಾರಾಮ್ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರಾದ ಪ್ರಕಾಶ್,ಮಹಮ್ಮದ್ ಹನೀಫ್, ಸಿನಾನ್ ಮುಗಸಿರ್ ಝಕಾರಿಯ ಮತ್ತಿತರರು ಸೇರಿ ಶುಕ್ರವಾರ ಮುಂಜಾನೆ 4ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿ ಧೂಮಪಾನಿಗಳಿಂದ ಅಥವಾ ಪ್ರದೇಶದಲ್ಲಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಲೈನ್ ನಿಂದಾಗಿ ಬೆಂಕಿ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.
ಬೆಂಕಿ ಪ್ರಕರಣ ಉಂಟಾದ ಸಮೀಪದಲ್ಲಿ ಅನಂತ ರಾವ್ ಎಂಬ ವರ ಕೃಷಿತೋಟವಿದ್ದು ಅಲ್ಲಿವರೆಗೂ ಬೆಂಕಿ ವ್ಯಾಪಿಸಿದೆ ಆದರೆ ಬೆಂಕಿ ಹತೋಟಿಗೆ ಬಂದ ಕಾರಣ ಯಾವುದೇ ಹಾನಿಯಾಗಿಲ್ಲ.
ಸ್ಥಳೀಯ ತಂಡ ರಚಿಸಲು ಆಗ್ರಹ
ಹಲವು ದಿನಗಳಿಂದ ಅಲ್ಲಲ್ಲಿ ಬೆಂಕಿ ಪ್ರಕರಣಗಳು ಕಂಡು ಬರುತ್ತಿದ್ದು ಅರಣ್ಯ ಇಲಾಖೆ ಅಗ್ನಿಶಾಮಕ ದಳ ಮಾಹಿತಿ ಸಿಕ್ಕ ಕೆಲವು ಹೊತ್ತಿನ ಬಳಿಕ ಸ್ಥಳಕ್ಕೆ ಆಗಮಿಸುವಾಗ ಬೆಂಕಿ ಸಾಕಷ್ಟು ಪರಿಸರವನ್ನು ಪಸರಿಸಿ ಹತೋಟಿಗೆ ತರಲು ತೊಂದರೆಯಾಗುತ್ತಿದೆ. ಈ ಕಾರಣದಿಂದ ಅರಣ್ಯ ಇಲಾಖೆ ಮಳೆಗಾಲ ಆರಂಭದ ತನಕ ಇಂತಹ ಪ್ರಕರಣಗಳು ಕಂಡು ಬರುತ್ತಿರುವ ಕಡೆ ಸ್ಥಳೀಯ ಯುವಕರ ತಂಡವನ್ನು ಗೌರವ ಧನ ನೀಡಿ ನೇಮಿಸಿದರೆ ಹೆಚ್ಚಿನ ಹಾನಿ ತಪ್ಪಿಸಬಹುದು ಎಂದು ಚಾರ್ಮಾಡಿ ಪ್ರಕಾಶ ನಾರಾಯಣರಾವ್ ಆಗ್ರಹಿಸಿದ್ದಾರೆ.