ಬೆಳ್ತಂಗಡಿ: ಆವರಣಗೋಡೆಯೊಂದು ವಾಹನ ಸಂಚಾರಿಗಳಿಗೆ ಅಪಾಯಕರವಾಗಿ ಪರಿಣಮಿಸುತ್ತಿದ್ದು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಾಗಿದೆ.
ಗುರುವಾಯನಕೆರೆ- ನಾರಾವಿ- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಅಳದಂಗಡಿ ಎಂಬಲ್ಲಿ ಈ ಅಪಾಯಕಾರಿ ತಾಣವಿದೆ. ದಿನವಿಡೀ ಸಹಸ್ರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಅಳದಂಗಡಿ ಸೇತುವೆ ಬಳಿ ತಿರುವೊಂದು ಇದ್ದು ಈ ರಸ್ತೆ ತಿರುವಿನ ಅಂಚಿನಲ್ಲಿ ವ್ಯಕ್ತಿಯೊಬ್ಬರು ರಸ್ತೆಯನ್ನು ಆಕ್ರಮಿಸಿ ಭದ್ರವಾದ ಆವರಣಗೋಡೆಯೊಂದನ್ನು ಕಟ್ಟಿ ತಣ್ಣಗಿದ್ದಾರೆ. ಇವರ ಈ ಕಾಮಗಾರಿ ವಾಹನ ಚಾಲಕರಿಗೆ ದುಃಸ್ವಪ್ನವಾಗಿ ಪರಿಣಮಿಸುತ್ತಿದೆ.
ಇಲ್ಲಿ ರಸ್ತೆಯು ಒಂದು ಕಡೆಯಿಂದ ಇಳಿಮುಖವಾಗಿದ್ದು ವಾಹನಗಳು ವೇಗವಾಗಿ ಬಂದು ತಿರುವಿ ಮುಂದೆ ಸಂಚರಿಸುತ್ತವೆ. ಇನ್ನೊಂದು ಬದಿಯಿಂದ ಬರುವ ವಾಹನಗಳಿಗೆ ಆವರಣಗೋಡೆ ಅಡ್ಡವಾಗಿ ಬರುವುದರಿಂದ ಎದುರಿನಿಂದ ಬರುವ ವಾಹನಗಳು ಗೋಚರಿಸುವುದಿಲ್ಲಾ.
ಹೀಗಾಗಿ ಅಪಘಾತ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಈಗಾಗಲೇ ಗುರುವಾಯನಕರೆ ಶಕ್ತಿನಗರದಿಂದ ರಸ್ತೆ ವ್ಯಾಪಕವಾಗಿ ಅಗಲಿಕರಣವಾಗುತ್ತಿದ್ದು, ಇಲ್ಲಿಯೂ ರಸ್ತೆ ಅಗಲವಾದರೆ ನಿರಾಯಾಸವಾಗಿ ವಾಹನ ಓಡಿಸಬಹುದಾಗಿದೆ ಎಂಬುದು ಚಾಲಕರ ಮನೋಗತ.
ಮುಂದಿನ ದಿನಗಳಲ್ಲಿ ಇಲ್ಲಿಯೇ ಸನಿಹದ ಶ್ರೀಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನೆರವೇರಲಿದ್ದು ಈ ಸಂದರ್ಭ ಆಡಳಿತ ಅತೀ ಹೆಚ್ಚು ವಾಹನಗಳ, ಭಕ್ತರ ಓಡಾಟವಿರಲಿದೆ. ಹೀಗಾಗಿ ಆವರಣವನ್ನು ಕೂಡಲೇ ಅನಾವರಣ ಮಾಡಬೇಕಾದ ಅವಶ್ಯಕತೆಯಿದೆ.