ಬೆಳ್ತಂಗಡಿ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಭಾರ್ಗವ ಸಭಾಭವನದಲ್ಲಿ ಸೆ.20ರಂದು ಜರಗಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜನಾರ್ದನ ಗೌಡ ಮಾತನಾಡಿ ಕಳೆದ ಆರ್ಥಿಕ ವರ್ಷದ ವ್ಯವಹಾರದಲ್ಲಿ ಸಂಘವು 1.60 ಕೋಟಿ ರೂ.ಗಿಂತ ಅಧಿಕ ಲಾಭಗಳಿಸಿದ್ದು, ಸದಸ್ಯರಿಗೆ ಶೇ.14 ಡಿವಿಡೆಂಟ್ ಹಾಗೂ ಸಿಬ್ಬಂದಿಗೆ ಶೇ.20 ಬೋನಸ್ ನೀಡಲು ನಿರ್ಣಯಿಸಲಾಗಿದೆ ಎಂದರು.
ಸಂಘವು 6,203ಎ ತರಗತಿ,ಸಿ ಮತ್ತು ಡಿ ತರಗತಿಯ 569 ಸದಸ್ಯರಿಂದ 5.54 ಕೋಟಿ ರೂ.ಗಿಂತ ಅಧಿಕ ಪಾಲುವಾಳ ಬಂಡವಾಳ ಸಂಗ್ರಹಿಸಿದೆ.59.27 ಕೋಟಿ ರೂ. ನಿರಖು ಠೇವಣಿ ಸಂಗ್ರಹ ಹೊಂದಿದ್ದು, 77.41 ಕೋಟಿ ರೂ.ಸಾಲಗಳನ್ನು ಸದಸ್ಯರಿಗೆ ವಿತರಿಸಿದೆ.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ 28.55 ಕೋಟಿ ರೂ. ಸಾಲ ಪಡೆದುದಕೊಂಡಿದ್ದು ವರ್ಷಾಂತ್ಯಕ್ಕೆ ಶೇ.100 ವಸೂಲಿಯಾಗಿರುತ್ತದೆ. ಇದಕ್ಕೆ ಸಹಕರಿಸಿದ ಸಂಘದ ಸದಸ್ಯರು ಸಿಬ್ಬಂದಿ ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಲಾಭಾಂಶದಲ್ಲಿ ರೈತ ಆರೋಗ್ಯ ಕ್ಷೇಮ ನಿಧಿ ಸ್ಥಾಪನೆ,ಕೃಷಿ ಉಪಕರಣ,ಗೊಬ್ಬರ ಖರೀದಿಗೆ ಸಾಲ ನೀಡುವ ಸಹಿತ ಸಂಘದ ಸದಸ್ಯರಿಗೆ ಹೆಚ್ಚಿನ ವ್ಯವಸ್ಥೆಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸದಸ್ಯರಾದ ಬಿಎ ರೆಹಮಾನ್, ಸುಜಿತ್ ಭಿಡೆ,ವಿಷ್ಣು ಆರ್. ಪಟವರ್ಧನ್ ನಾಮದೇವರಾವ್, ಬಾಬು ಪೂಜಾರಿ, ವೆಂಕಟೇಶ್ವರ ಭಟ್, ವಿಶ್ವನಾಥ ಬೆಂಡೆ, ಗೋವಿಂದ ಮರಾಠೆ ಮತ್ತಿತರರು ಸಂಘದ ಬೆಳವಣಿಗೆ ಬಗ್ಗೆ ಸಲಹೆ ನೀಡಿದರು.
ನಿರ್ದೇಶಕರಾದ ಕೊರಗಪ್ಪ ನಾಯ್ಕ್, ಜ್ಯೋತಿ ಜೆ ಫಡ್ಕೆ, ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ನಂದಕುಮಾರ್, ಸುಮನಾ ಗೋಖಲೆ, ನಯನಾ,ಶಶಿಧರ ಬಿ, ಸಂಜೀವ ಗೌಡ, ಶಶಿಧರ,ಗಜಾನನ ವಝೆ,ವಲಯ ಮೇಲ್ವಿಚಾರಕ ಸಂದೇಶ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪ್ರಕಾಶನಾರಾಯಣ ರಾವ್ ಸ್ವಾಗತಿಸಿದರು. ಸಿಇಒ ನಾರಾಯಣ ಫಡ್ಕೆ ವರದಿ ವಾಚಿಸಿದರು.ಶಾಖಾ ಪ್ರಬಂಧಕರಾದ ಪ್ರಸನ್ನ ಪರಾಂಜಪೆ, ಮಧುಕರರಾವ್, ಚಂದ್ರಕಾಂತ ಪ್ರಭು ಕಾರ್ಯಕ್ರಮ ನಿರೂಪಿಸಿದರು
ಸಂಘದ ಮಾಜಿ ಅಧ್ಯಕ್ಷ ಎನ್ ಎಸ್ ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ಅಂಗವಾಗಿ ಸಂಘದ ವ್ಯಾಪ್ತಿಯ ಮುಂಡಾಜೆ, ಕಲ್ಮಂಜ,ಚಾರ್ಮಾಡಿ, ಚಿಬಿದ್ರೆ ,ತೋಟತ್ತಾಡಿ, ನೆರಿಯ ಗ್ರಾಮಗಳ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ 49 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಲಾಯಿತು.
ಸಂಘದ ಮೂಲಕ ಕ್ಯಾಂಪ್ಕೋಗೆ ಅತಿ ಹೆಚ್ಚು ಅಡಕೆ ಮಾರಾಟ ಮಾಡಿದ ಗೋಪಾಲ ಪಟವರ್ಧನ್,ರಬ್ಬರ್ ಸೊಸೈಟಿಗೆ ಸಂಘದ ಮೂಲಕ ರಬ್ಬರ್ ಮಾರಾಟ ಮಾಡಿದ ಫ್ರಾನ್ಸಿಸ್ ಟಿ.ಪಿ. ಹಾಗೂ ಕುಡುಮಡ್ಕ ರಾಘವ ಗೌಡ ಅವರನ್ನು ಅಭಿನಂದಿಸಲಾಯಿತು. ಸಂಘದ ಯಂತ್ರೋಪಕರಣ ಮಳಿಗೆಯಲ್ಲಿ ಮಹಾಸಭೆ ಅಂಗವಾಗಿ ಕೃಷಿ ಉಪಕರಣ ಖರೀದ ಸದಸ್ಯರಿಗೆ ಶೇ. 20 ರಿಂದ 35 ರ ತನಕ ರಿಯಾಯಿತಿ ನೀಡಲಾಗಿತ್ತು.