ಬೆಳ್ತಂಗಡಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭ ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಇಲಾಖೆಗಳಿಂದ ಆಯ್ದ 75 ಮಂದಿ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಮೂಲಕ ವಿಶಿಷ್ಟವಾಗಿ ಅಮೃತ ಮಹೋತ್ಸವ ವನ್ನು ಆಚರಿಸಲಾಯಿತು.
ಬೆಳ್ತಂಗಡಿ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಧ್ವಜಾವರೋಹಣ ಕಾರ್ಯಕ್ರಮ ಮುಗಿಸಿ, ಅಲ್ಲಿಂದ ಗುರುವಾಯನಕೆರೆ ಕಿನ್ಯಮ್ಮ ಸಭಾಭವನದಲ್ಲಿ ಸುಮಾರು ೧೫ ಇಲಾಖೆಗಳ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ನೆರವೇರಿತು.
750 ಬೈಕ್ ಆಕರ್ಷಕ ರ್ಯಾಲಿ
ಅಮೃತ ಮಹೋತ್ಸವದ ಅಂಗವಾಗಿ ಬೆಳ್ತಂಗಡಿ ತಾಲೂಕು ಕಚೇರಿ ಆವರಣದಿಂದ ಗುರುವಾಯನಕೆರೆ ಕಿನ್ಯಮ್ಮ ಸಭಾಭವನದ ತನಕ ೭೫೦ ಬೈಕ್ಗಳ ಆಕರ್ಷಕ ರ್ಯಾಲಿ ನಡೆಯಿತು. ಪೋಲಿಸ್, ಮೆಸ್ಕಾಂ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಸಿಬ್ಬಂದಿಗಳು ೭೫೦ ಬೈಕ್ಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಶಾಸಕ ಹರೀಶ್ ಪೂಂಜ ಅವರು ಬೈಕ್ ಓಡಿಸಿ ರ್ಯಾಲಿಯಲ್ಲಿ ಪಾಲ್ಗೊಂಡು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಉತ್ತೇಜಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಹಸಿಂಹ ನಾಯಕ್ ಪ. ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ತಹಸೀಲ್ದಾರ್ ಪೃಥ್ವಿ ಸಾನಿಕಮ್, ತಾ.ಪಂ. ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್, ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ., ಲೋಕೋಪಯೋಗಿ ಇಲಾಖೆ ಎಇಇ ಶಿವಪ್ರಸಾದ್ ಅಜಿಲ, ಮೆಸ್ಕಾಂ ಎಇಇ ಶಿವಶಂಕರ್, ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಟಿ.ಎನ್., ಸಿಡಿಪಿಒ ಪ್ರಿಯಾ ಆಗ್ನೆಸ್ ಚಾಕೊ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ ಅವರನ್ನು ಅಮೃತ ಮಹೋತ್ಸವ ಸಂದರ್ಭ ಸನ್ಮಾನಿಸಲಾಯಿತು. ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಂದೇಶವನ್ನು ವಾಚಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಸ್ವಾಗತಿಸಿದರು. ತಾ.ಪಂ. ಇಒ ಕುಸುಮಾಧರ್ ಬಿ. ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.
ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಹಿರಿಯರ ತ್ಯಾಗ, ಪರಿಶ್ರಮವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಕೆಲಸ ಆಗಬೇಕಾಗಿದೆ. ಹಿರಿಯರ ತ್ಯಾಗ ಬಲಿದಾನದಿಂದ ನಮಗೆ ಸ್ವತಂತ್ರ ಸಿಕ್ಕಿದೆ. ಅದರ ಬಳಿಕ ಶತ್ರುಗಳ ದಾಳಿಯಿಂದ ಗಡಿಗಳಲ್ಲಿ ಯೋಧರು ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಸಮರ್ಥ ಆಡಳಿತದಿಂದ ಇಂದು ನಮ್ಮ ದೇಶವನ್ನು ಎಲ್ಲರೂ ಗುರುತಿಸುವಂತಾಗಿದೆ ಎಂದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಆರಂಭದಲ್ಲಿ ತಾಲೂಕಿನ ಅಧಿಕಾರಿಗಳ, ಸಿಬ್ಬಂದಿಗಳ ಸಹಯೋಗದಲ್ಲಿ ವಿವಿಧ ಇಲಾಖೆಗಳಿಂದ ಅರ್ಹ 7500 ಮಂದಿ ಫಲಾನುಭವಿಗಳಿಂದ ಸವಲತ್ತು ವಿತರಿಸಲಾಗಿತ್ತು. ಇಂದು ಸಮಾರೋಪದಲ್ಲಿ 2500 ಮಂದಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗುತ್ತಿದೆ.ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪ್ರಧಾನ ಭಾಷಣಗಾರರಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ಮಾತನಾಡಿ ನಮ್ಮ ದೇಶದ ಮೇಲೆ ಕೇವಲ ಬ್ರಿಟಿಷರು ಮಾತ್ರ ಆಕ್ರಮಣ ನಡೆಸಿಲ್ಲ. ಸುಮಾರು ಎರಡು ಸಾವಿರ ವರ್ಷಗಳಿಂದ ಶತ್ರುಗಳು ನಿರಂತರ ದಾಳಿ ನಡೆಸಿದ್ದಾರೆ. ಆದರೆ ನಮ್ಮ ದೇಶ ಮಾತ್ರ ಯಾವುದೇ ತೊಂದರೆಗೆ ಒಳಗಾಗಿಲ್ಲ. ಇತ್ತಿಚಿನ ದಿನಗಳಲ್ಲಿ ನಮ್ಮ ದೇಶ ವಿಶ್ವವಂದ್ಯ ಭಾರತವಾಗಿ ಪ್ರಜ್ವಲಿಸುತ್ತಿದೆ.ಸಮರ್ಥ ನಾಯಕತ್ವದಿಂದ ವಿಶ್ವದ ಯಾವುದೇ ದೇಶಗಳು ತುಟಿ ಬಿಚ್ಚುತ್ತಿಲ್ಲ. ಸಮಸ್ಯೆ ಮಾಡುವವರಿಗೆ ಪ್ರತ್ತುತ್ತರ ನೀಡುವ ಕೆಲಸ ಆಡಳಿತ ಮಾಡುತ್ತಿದೆ. ಗಡಿಗಳಲ್ಲಿ ಯೋಧರ ಸೇವೆಯಿಂದ ನಾವೆಲ್ಲರೂ ನಿಶ್ವಿಂತೆಯಿಂದ ಇದ್ದೇವೆ. ಅವರಿಗೆ ಗೌರವ ನೀಡುವ ಮೂಲಕ ಗೌರವಿಸಬೇಕಾಗಿದೆ ಎಂದರು.
750 ಮಂದಿಗೆ ಕಂದಾಯ ಇಲಾಖೆಯಿಂದ 94ಸಿ ಹಕ್ಕುಪತ್ರ ಹಾಗೂ ವಿವಿಧ ಪಿಂಚಣಿಗಳ ಸೇವೆ ವಿತರಣೆ
75 ಮಂದಿ ನಿವೇಶನ ರಹಿತರಿಗೆ ತಾಲೂಕು ಪಂಚಾಯಿತಿಯಿಂದ ನಿವೇಶನ ಹಂಚಿಕೆ
75 ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯಿತಿಗಳಿಂದ ತೂಕದ ಯಂತ್ರ ಒದಗಿಸುವುದು
75 ದನದ ಕೊಟ್ಟಿಗೆಗಳ ಮ್ಯಾಟ್ ಪಶು ಸಂಗೋಪನೆ ಇಲಾಖೆಯಿಂದ ವಿತರಣೆ
75 ಮಂದಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಶಿಕ್ಷಣ ಇಲಾಖೆಯಿಂದ ಟ್ಯಾಬ್ ವಿತರಣೆ
75 ಶಾಲೆಗಳಿಗೆ ಅರಣ್ಯ ಇಲಾಖೆಯಿಂದ ಬೆಂಚು ಡೆಸ್ಕ್ ವಿತರಣೆ
75 ರೈತರಿಗೆ ಕೃಷಿ ಇಲಾಖೆಯಿಂದ ತೋಟಗಾರಿಕಾ ಬೆಳೆಗಳ ಗಿಡ ವಿತರಣೆ
75 ಮಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ವಿತರಣೆ
75 ವಿವಿಧ ತಳಿಯ ಕಾಡು ಸಸಿಗಳನ್ನು ಅರಣ್ಯ ಇಲಾಖೆ ವತಿಯಿಂದ ಟ್ರೀ ಪಾರ್ಕ್ ನಲ್ಲಿ ನೆಡುವುದು.
75 ಅಂಗನವಾಡಿಗಳಿಗೆ ಮೆಸ್ಕಾಂ ಗುತ್ತಿಗೆದಾರರ ಸಂಘದಿಂದ ಫ್ಯಾನ್ ವಿತರಣೆ
75 ಪೋಡಿ ಮುಕ್ತ ಕಡತಗಳ ಸರ್ವೆಯಿಂದ ವಿಲೇವಾರಿ.
75 ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯಿಂದ ಮಂಜೂರಾತಿ ಆದೇಶ ಪತ್ರ ವಿತರಣೆ
75 ವಿಶೇಷಚೇತನರಿಗೆ ವಿಕಲಚೇತನ ಕಲ್ಯಾಣ ಇಲಾಖೆಯಿಂದ ಯು.ಡಿ.ಐ.ಡಿ. ಕಾರ್ಡ್ ವಿತರಣೆ
75 ಮಹಿಳೆಯರಿಗೆ ಲೋಕೋಪಯೋಗಿ ಇಲಾಖೆಯಿಂದ ಹೊಲಿಗೆ ಯಂತ್ರ ವಿತರಣೆ
75 ಕೃಷಿಕರಿಗೆ ತಾಲೂಕು ವೈನ್ ಮರ್ಚೆಂಟ್ ಅಸೋಸಿಯೇಷನ್ ನಿಂದ ಕೃಷಿಕರಿಗೆ ಕಳೆ ಕೊಚ್ಚುವ ಯಂತ್ರ ವಿತರಣೆ