ಬೆಳ್ತಂಗಡಿ: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಭಾಷಾ ಸಾಮರಸ್ಯ ದಿನಾಚರಣೆ ಜರಗಿತು. ಪೆರಿಂಜೆ ಶ್ರೀ ಧ.ಮಂ ಪ್ರೌಢಶಾಲೆಯ ಹಿಂದಿ ಶಿಕ್ಷಕ ಶ್ರೀಧರ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾಷೆ ಸಂವಹನಕ್ಕಾಗಿ, ಬದುಕಿಗಾಗಿ ಮತ್ತು ಸಾಮರಸ್ಯಕ್ಕಾಗಿ ಇರುವುದೇ ಹೊರತು ಪರಸ್ಪರ ದ್ವೇಷ ಹರಡಿಸುವುದಕ್ಕೆ ಇರುವ ಸಂಗತಿಯಲ್ಲ. ಯಾವುದೇ ಭಾಷೆಗೆ ಪರಸ್ಪರ ಬೆಸೆಯುವ ಶಕ್ತಿ ಇದೆ. ಭಾಷೆಯನ್ನು ಕಲಿಯುತ್ತಾ ಸಮಾಜ ನಾಗರಿಕ ಸಮಾಜವಾಗಿ ರೂಪುಗೊಳ್ಳುವಂತಾಗಬೇಕು ಎಂದರು.
ಪೋಷಕ ಸಂಘದ ಉಪಾಧ್ಯಕ್ಷೆ ಯಶೋದಾ ಶುಭಕೋರಿದರು. ವಿದ್ಯಾರ್ಥಿಗಳ ಪರವಾಗಿ ನೂರುನ್ನಿಹಾ ಭಾಷಾ ಸಾಮರಸ್ಯದ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ವಹಿಸಿದ್ದರು. ಶಿಕ್ಷಕರು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಹಿಂದಿ ಭಾಷೆಯಲ್ಲಿ ನಾಟಕ,ನೃತ್ಯ,ಗಾಯನ , ಕಿರು ಪ್ರಹಸನ ಮೊದಲಾದ ಕಲಾ ಕಾರ್ಯಕ್ರಮಗಳು ಜರಗಿದವು.ಮಕ್ಕಳಿಗೆ ಹಿಂದಿ ಬರವಣಿಗೆ, ಕವಿತೆ ರಚನೆ, ಓದುವಿಕೆ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು . ಕಲಾ ಕಾರ್ಯಕ್ರಮಗಳನ್ನು ಶ್ರಾವ್ಯಾ ಎಸ್ ವಿ ಮತ್ತು ಶಾರಿಯಾ ಖಾನಂ ಸಂಯೋಜಿಸಿದರು.
ಸಮಾರಂಭದ ಮಾರ್ಗದರ್ಶಿ ಹಾಗೂ ಶಾಲೆಯ ಹಿಂದಿ ಶಿಕ್ಷಕಿ ರಾಜಶ್ರೀ ಸ್ವಾಗತಿಸಿ, ವಿದ್ಯಾರ್ಥಿನಿ ಅಮೂಲ್ಯಾ ವಂದಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಮಹಮ್ಮದ್ ತಾಹಿರ್ ಹಾಗೂ ಸ್ವಸ್ತಿಕ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ಸಂಯೋಜಿಸಿ, ಹಿಂದಿ ಭಾಷೆಯ ಪ್ರೌಢಿಮೆಯನ್ನು ತೋರಿದರು.