ಬೆಳ್ತಂಗಡಿ, ಡಿ.27: ಹಿರೊಯರ ಅನುಭವದೊಂದಿಗೆ ಮುಂದಿನ ತಲೆಮಾರಿನ ದೃಷ್ಟಿಕೋನದಲ್ಲಿ ಉಜಿರೆಯಲ್ಲಿ ನಡೆಯುವ ಸಮ್ಮೇಳನವನ್ನು ಯಶಸ್ವಿಗೊಳಿಅಬೇಕಾದ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ದ.ಕ. ಕಸಾಪ ಜಿಲ್ಲಾ ಸಮ್ಮೇಳನ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಆಶಿಸಿದರು.
ದ.ಕ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಫೆ.3 ರಿಂದ 5ರವರೆಗೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆಯಲಿರುವ ದ.ಕ.ಕಸಾಪ ಜಿಲ್ಲಾ ಸಮ್ಮೇಳನದ ಕುರಿತು ಡಿ.27 ರಂದು ಉಜಿರೆ ರಾಮಕೃಷ್ಣ ಸಭಾಭವನದಲ್ಲಿ ನಡೆದ ಪೂರ್ವತಯಾರಿ ಸಭೆಯಲ್ಲಿ ಮಾತನಾಡಿದರು.
ಡಾ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮುನ್ನಡೆದು ವಿಭಿನ್ನ ಕಾರ್ಯಕ್ರಮವಾಗಿ ಮೂಡಿಬರಬೇಕಿದೆ. ಈ ಮಧ್ಯೆ ಸದಸ್ಯತ್ವವನ್ನು ಹೆಚ್ಚಾಗಿ ಮಾಡಬೇಕು. ಎಲ್ಲರ ಸಹಕಾರ ಸಲಹೆ ಅಗತ್ಯವಾಗಿದ್ದು, ಎಲ್ಲರೂ ತಮ್ಮ ಜವಾಬ್ದಾರಿ ಎಂದು ತಿಳಿದು ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ ಮಾತನಾಡಿ, ಸರಕಾರದ ಸಹಯೋಗದ ಜತೆಗೆ ಸಾರ್ವಜನಿಕರ ಸಹಕಾರ ಅತ್ಯವಶ್ಯವಾಗಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ, ಹೇಮಾವತಿ ಅಮ್ಮನವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ. ಯಾವುದೇ ಅಪಸ್ವರ ಬಾರದಂತೆ ಮುನ್ನಡೆಸೋಣ ಎಂದು ಆಶಿಸಿದರು.
ದ.ಕ.ಜಿಲ್ಲಾ ಕಸಪಾ ಅಧ್ಯಕ್ಷ ಡಾ.ಎಂ.ಪಿ.ಶ್ರೀನಿವಾಸ್ ಮಾತನಾಡಿ, ಸಮ್ಮೇಳನ ಅಧ್ಯಕ್ಷರಾಗಿ ಡಾ.ಹೇಮಾವತಿ ವೀ. ಹೆಗ್ಗಡೆಯವರ ಮುಂದಾಳತ್ವದಲ್ಲಿ ನಡೆಯಲಿದ್ದು, ಅವರು ಈ ಕುರಿತು ವಿಶೇಷ ನಿರೀಕ್ಷೆ ಇಟ್ಟಿದ್ದಾರೆ. ಸಮ್ಮೇಳನ ಆಶಯಕ್ಕೆ ತಕ್ಕ ಗೋಷ್ಠಿಗಳು ಇಟ್ಟುಕೊಳ್ಳಬೇಕು. ಹಿರಿಯರ ಜತೆಗೆ ವಿದ್ಯಾರ್ಥಿಗಳು ಎಂಬ ಚಿಂತನೆಯಡಿ ಸಂವಾದ ಕಾರ್ಯಕ್ರಮ ಮಾಡುವ ಬಗ್ಗೆ ಅವರು ಸಲಹೆ ನೀಡಿದ್ದಾರೆ. 9 ತಾಲೂಕುಗಳಿಂದ ಸಂಪನ್ಮೂಲ ವ್ಯಕ್ತಿಗಳು, ಸಾಹಿತಿಗಳನ್ನು ಸೇರಿಕೊಂಡು ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನದ ವಿವಿಧ ಸಮಿತಿಗಳ ಜವಾಬ್ದಾರಿ ಹಂಚುವ ಕುರಿತು ಚರ್ಚಿಸಲಾಯಿತು. ಡಿ.29 ರಂದು ಸಂಜೆ 5 ಗಂಟೆಗೆ ಉಜಿರೆ ರಾಮಕೃಷ್ಣ ಸಭಾಭವನದಲ್ಲಿ ಸಮ್ಮೇಳನ ಸಮಿತಿ ಸಂಚಾಲಕರ ಸಭೆ ನಡೆಸುವ ಬಗ್ಗೆ ತಿಳಿಸಲಾಯಿತು.
ಕಸಾಪ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಡಿ.ಯದುಪತಿ ಗೌಡ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಆರ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖ ಸಾಹಿತ್ಯ ಗಣ್ಯರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.
ತಾಲೂಕು ಕಸಾಪ ಕಾರ್ಯದರ್ಶಿ ರಾಮಕೃಷ್ಣ ಚೊಕ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.