ಮಂಗಳೂರು: ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸಂತ ಜೆರೋಸಾ ಶಾಲೆ ಜೆಪ್ಪು ಇದರ ಸಹಯೋಗದೊಂದಿಗೆ ಮೇ 13 ರಿಂದ 17 ರವರೆಗೆ ಜೆಪ್ಪು ಸಂತ ಜೆರೋಸಾ ಶಾಲೆಯ ಸಭಾಂಗಣದಲ್ಲಿ ಚಿಣ್ಣರ ಕಲರವ – 2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವು ಜರುಗಲಿದೆ ಎಂದು ಉಭಯ ಸಂಘಟನೆಗಳು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
5 ದಿನಗಳ ಕಾಲ ನಡೆಯಲಿರುವ ಈ ಕಾರ್ಯಾಗಾರದ ಉದ್ಘಾಟನೆಯು ಮೇ 13ರಂದು ಸೋಮವಾರ ಬೆಳಿಗ್ಗೆ 9 ಕ್ಕೆ ಜರುಗಿದರೆ, ಸಮಾರೋಪ ಸಮಾರಂಭ ಹಾಗೂ ಮಕ್ಕಳ ಪ್ರತಿಭಾ ಪ್ರದರ್ಶನವು ಮೇ 17ರಂದು ಶುಕ್ರವಾರ ಸಂಜೆ 4 ಕ್ಕೆ ಜರುಗಲಿದೆ. ಕಾರ್ಯಾಗಾರದಲ್ಲಿ ಹಾಡುಗಾರಿಕೆ, ಕ್ರಿಯಾತ್ಮಕ ಚಿತ್ರಕಲೆ,ಮುಖವಾಡ ತಯಾರಿ, ಮಿಮಿಕ್ರಿ, ಮೂಕಾಭಿನಯ, ಮನೋರಂಜನಾ ಆಟಗಳು, ನಾಟಕ,ಗೊಂಬೆ ತಯಾರಿ, ಗೂಡುದೀಪ ತಯಾರಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ತರಗತಿಗಳು ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ನಾಡಿನ ಖ್ಯಾತ ಕಲಾವಿದರೂ,ಗಣ್ಯ ವ್ಯಕ್ತಿಗಳಾದ ಪ್ರವೀಣ್ ವಿಸ್ಮಯ ಬಜಾಲ್, ಮೈಮ್ ರಾಮದಾಸ್, ವಿಸ್ಮಯ ವಿನಾಯಕ, ವಿದ್ದು ಉಚ್ಚಿಲ್, ಪ್ರೇಮನಾಥ ಮರ್ಣೆ, ಮೇಘನಾ ಕುಂದಾಪುರ, ತಾರನಾಥ ಕೈರಂಗಳ, ಚಂದ್ರಾಡ್ಕರ್, ಜುಬೇರ್ ಖಾನ್ ಕುಡ್ಲ, ಶಿವರಾಂ ಕಲ್ಮಡ್ಕ, ಮನೋಜ್ ವಾಮಂಜೂರು ಮುಂತಾದವರು ಭಾಗವಹಿಸಲಿದ್ದಾರೆ.
ವಿದ್ಯಾರ್ಥಿ ಸಮುದಾಯ ಸಮಾಜದ ಒಂದು ಸ್ರಜನಶೀಲ ವಿಭಾಗ. ಬಾಲ್ಯಾವಸ್ಥೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಹಲವು ರೀತಿಯ ಸುಪ್ತಪ್ರತಿಭೆಗಳಿರುತ್ತದೆ. ಅಂತಹ ಬಹುಮುಖ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಾಗಾರದಲ್ಲಿ 5ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
80 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಬಹುತೇಕ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಮುಗಿದಿದ್ದು, ಇನ್ನು ಕೇವಲ 10ರಿಂದ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಆಸಕ್ತಿಯಿರುವ ವಿದ್ಯಾರ್ಥಿಗಳು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ 9448503739, 9964186046, 9845084707 ನಂಬರಿಗೆ ಸಂಪರ್ಕಿಸಬೇಕೆಂದು ಉಭಯ ಸಂಘಟನೆಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.