ಬೆಳ್ತಂಗಡಿ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಮನೆ ಮನೆಗಳಲ್ಲಿ ನೆನಪಿಸಲು ಪ್ರಧಾನಿ ನರೇಂದ್ರ ಮೋದಿಯವರು ೭೫ನೇ ಸ್ವಾತಂತ್ರ್ಯೋತ್ಸವವನ್ನು ದೇಶದಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಕರೆಕೊಟ್ಟಿದ್ದು ಪ್ರಧಾನಿಯವರ ಸಂಕಲ್ಪದಂತೆ ತಾಲೂಕಿನಲ್ಲಿಯೂ ಅವಿಸ್ಮರಣೀಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮತ್ತು ತಾ.ಪಂ ಅಧಿಕಾರಿಗಳ ಸಭೆಯನ್ನು ಉದ್ಧೇಶಿಸಿ ಮಾತನಾಡಿ ಪ್ರತೀ ಮನೆ ಮನೆಯಲ್ಲಿ ಧ್ವಜಾರೋಹಣಕ್ಕೆ ಅವಕಾಶ ಕೊಟ್ಟಿದ್ದು ಅಲ್ಲದೆ ರಾತ್ರಿ ಹೊತ್ತು ಕೂಡ ಧ್ವಜ ಹಾರಾಟಕ್ಕೆ ಅವಕಾಶವನ್ನು ಪ್ರಧಾನಿಯವರು ನೀಡಿದ್ದು ಇದೊಂದು ಎಲ್ಲರ ಸುಯೋಗವಾಗಿದೆ. ಈ ರೀತಿ ಆಚರಿಸುವ ಮೂಲಕ ದೇಶ ಮತ್ತಷ್ಟು ಶಸಕ್ತ ಮತ್ತು ಸದೃಢವಾಗಲು ಸಾಧ್ಯ. ಇದರಿಂದ ಪ್ರತಿಯೊಬ್ಬರಲ್ಲೂ ದೇಶಪ್ರೇಮ ಹೆಚ್ಚಾಗಲು ಸಾಧ್ಯ. ತಾಲೂಕಿನ ಪ್ರತೀ ಗ್ರಾಮ ಗ್ರಾಮಗಳಲ್ಲೂ ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದ್ದು ಮುಂದಿನ ಜನಾಂಗವು ಸದಾ ನೆನಪಿನಲ್ಲಿಟ್ಟುಕೊಳ್ಳುವ ರೀತಿಯಲ್ಲಿ ಕಾರ್ಯಕ್ರಮ ಆಗಬೇಕು ಎಂದು ತಿಳಿಸಿದರು.
ತಾಲೂಕಿನ ಪ್ರತಿಯೊಬ್ಬರೂ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಮತ್ತು ಅಧಿಕಾರಿಗಳೊಂದಿಗೆ ಕೈಜೋಡಿಬೇಕು ಎಂದರು. ಸಭೆಯಲ್ಲಿ ತಾ.ಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ್ ಉಪಸ್ಥಿತರಿದ್ದರು. ತಾ.ಪಂ ಸಂಯೋಜಕ ಜಯಾನಂದ್ ಲಾಯಿಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.