ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿದ್ದು ಮುಂಡಾಜೆ ಹಾಗೂ ಆಸು ಪಾಸಿನ ಗ್ರಾಮಗಳ ಅಲ್ಲಲ್ಲಿ ಕೆಲವೊಂದು ಸಣ್ಣಪುಟ್ಟ ಅನಾಹುತಗಳು ಸಂಭವಿಸುತ್ತಿವೆ.
ಮುಂಡಾಜೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಭಿಡೆ ಕ್ರಾಸ್ ಎಂಬಲ್ಲಿ ಶಕುಂತಲಾ ಮೆಹಂದಳೆ ಅವರ ಮನೆಯ ಹಿಂಭಾಗದ ಗುಡ್ಡ ಕುಸಿದು ಮಳೆ ನೀರು ಮನೆಯ ಹಿಂಭಾಗದ ಜಗಲಿಯನ್ನು ಆವರಿಸಿದೆ. ಸ್ಥಳೀಯರು ಹೆಚ್ಚಿನ ಹಾನಿ ಉಂಟಾಗದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.
ಮುಂಡಾಜೆ ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರ ಒಂದು ರಸ್ತೆಗೆ ಉರುಳಿ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ದಿಡುಪೆ ಸಮೀಪದ ಮನೆಯೊಂದರ ಪಕ್ಕದ ಗುಡ್ಡ ಕುಸಿತವಾದ ಬಗ್ಗೆ ತಿಳಿದುಬಂದಿದೆ. ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಕಾಪು ಎಂಬಲ್ಲಿ ಮರದ ರೆಂಬೆಯ ಒಂದು ಮುರಿದು ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಉಜಿರೆಯ ಶಿವಾಜಿನಗರ ಸಮೀಪ ಭಾಸ್ಕರ ಎಂಬವರ ಮನೆ ಪಕ್ಕದ ಗುಡ್ಡ ಕುಸಿತವಾಗಿದ್ದು ಮಣ್ಣು ಮನೆಯ ಗೋಡೆಯನ್ನು ಆವರಿಸಿದೆ. ತಾಲೂಕಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು ಗ್ರಾಹಕರ ಪರದಾಟ ಮುಂದುವರಿದಿದೆ.
ನೇತ್ರಾವತಿ ನದಿಯು ತುಂಬಿ ಹರಿಯುತ್ತಿದ್ದು ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ತೇಲಿ ಬಂದ ಜಾನುವಾರೊಂದು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಲಾಗಿರುವ ಸೇತುವೆಯಲ್ಲಿ ಸಿಕ್ಕಿ ಪ್ರಾಣ ಬಿಟ್ಟಿರುವುದು ಇಂದು ಬೆಳಗಿನ ಜಾವ ಸ್ಥಳೀಯರಿಗೆ ಕಂಡು ಬಂದಿದೆ. ಆದರೆ ಇದರ ವಾರಸುದಾರರು ಯಾರೆಂದು ತಿಳಿದು ಬಂದಿಲ್ಲ.
ಮಲವಂತಿಗೆ ಗ್ರಾಮದ ಪರಾರಿ ಗುಡ್ಡೆ ಎಂಬಲ್ಲಿ ನಿನ್ನೆಯಿಂದ ವಿಪರೀತ ಮಳೆ ನೀರಿನ ಮಟ್ಟ ಜಾಸ್ತಿ ಆಗಿ ಇವತ್ತು ಸುಂದರ ಪೂಜಾರಿ ಎಂಬವರ ಮನೆಗೆ ಗುಡ್ಡ ಕುಸಿದು ಮನೆ ಸಂಪೂರ್ಣ ಹಾನಿಗೊಂಡಿದ್ದೆ ಈಗಾಗಲೇ ಸ್ಥಳೀಯ ಸ್ವಯಂ ಸೇವಕರು ಬಂದು ಮನೆ ಆನಿಗೊಳಗಾಗದ ಸಾಮಗ್ರಿಗಳನ್ನು ಸ್ಥಳಾಂತರ ಮಾಡಿದರಲ್ಲದೆ ಸಂತ್ರಸ್ತರು ನೆರೆ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಚಾರ್ಮಾಡಿ ಗ್ರಾಮದ ರಫೀಕ್ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.ಲಾಯಿಲ ಗ್ರಾಮದ ರಾಧಾ ಎಂಬುವರ ಮನೆ ಹಿಂಬಾಗ ಗುಡ್ಡ ಜರಿದಿದೆ. ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ. ಮುಂಡಾಜೆಯ ಉಳ್ಳಾಲ್ತಿ ಕಲ್ಲು ಎಂಬಲ್ಲಿ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ತಡೆಯುಂಟಾಗಿದೆಯಲ್ಲದೆ ವಿದ್ಯುತ್ ಕಂಬ ಬಿದ್ದಿದೆ.
ಮಿತ್ತಬಾಗಿಲು ಗ್ರಾಮದ ಕಿಲ್ಕೂರು ಹಿ.ಪ್ರಾ.ಶಾಲೆಯ ಪಕ್ಕದ ಗುಡ್ಡ ಕುಸಿದಿದೆ. ಕಳಿಯ ಗ್ರಾಮದ ಗ್ರಾಮ ಸಹಾಯಕ ಸ್ಟ್ತಾನ್ಲಿ ಡಿ ಸೋಜ ಅವರ ಅಡಕೆ ತೋಟ ಜರಿದಿದೆ.