News Karnataka Kannada
Monday, May 06 2024
ಮಂಗಳೂರು

ಬೆಳ್ತಂಗಡಿ: ಸಮುದಾಯ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಹರೀಶ್ ಪೂಂಜಾ

MLA Harish Poonja visits community hospital
Photo Credit :

ಬೆಳ್ತಂಗಡಿ: ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಯಲ್ಲಿ ವ್ಯತ್ಯಾಸ, ಸ್ವಚ್ಛತ ನಿರ್ಲಕ್ಷ ಹಾಗೂ ಇತರೆ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರ ದೂರಿನಂತೆ ಶಾಸಕ ಹರೀಶ್ ಪೂಂಜಾ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿ, ಹಲವಾರು ಕ್ರಮಗಳನ್ನು ಕೂಡಲೇ ನಿರ್ವಹಿಸುವಂತೆ ಸೂಚಿಸಿದರು.

ರೋಗಿಗಳಿಗೆ ತ್ವರಿತ ಸೇವೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯ ದಾದಿಯರ ಮತ್ತು ಸಿಬ್ಬಂದಿಗಳ ವಸತಿಗೃಹದ ಸುತ್ತಮುತ್ತ ಗಿಡಗಂಟೆಗಳು ತುಂಬಿದ್ದು ಅಲ್ಲದೆ ಆಸ್ಪತ್ರೆಯ ತ್ಯಾಜ್ಯ ನೀರು ವಸತಿಗೃಹದ ಹತ್ತಿರದಲ್ಲೇ ಹರಿಯುತ್ತಿರುವುದರಿಂದ ದುರ್ನಾತ ಬೀರುತ್ತಿದ್ದು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಅಲ್ಲದೆ ಆಸ್ಪತ್ರೆಯ ಸುತ್ತಮುತ್ತ ಅಶುಚಿತ್ವ ಇರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಿದ್ದವು.

ವಸತಿಗೃಹದ ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸಿದ ಶಾಸಕರಯಾ ನ.ಪಂ ಇಂಜಿನಿಯರ್ ಮಹಾವೀರ ಅರಿಗರವರಿಗೆ ಯಾವುದೇ ಕಾನೂನಿನ ನೆಪ ಒಡ್ಡದೇ ಎರಡು ದಿನದೊಳಗೆ ಗಿಡಗಂಟೆಗಳನ್ನು ತೆರವುಗೊಳಿಸಬೇಕು, ತ್ಯಾಜ್ಯ ನೀರು ಹರಿಯುವಲ್ಲಿ ಪೈಪ್ ಅಳವಡಿಸಿ ಸರಿಪಡಿಸಬೇಕು ಎಂದು ಸೂಚಿಸಿದರು.

ಡಯಾಲಿಸೀಸ್ ಸೆಂಟರ್‌ಗೆ ಭೇಟಿ ನೀಡಿದ ಶಾಸಕರು ಅಲ್ಲಿನ ನೀರಿನ ಸಮಸ್ಯೆಯ ಬಗ್ಗೆ ವೈದ್ಯರಿಂದ, ಸಿಬ್ಬಂದಿಗಳಿಂದ, ರೋಗಿಗಳಿಂದ ಮಾಹಿತಿ ಪಡೆದರು. ನೀರಿನ ಸಮಸ್ಯೆ ಇರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು ಇಂತಹ ಘಟನೆ ಮುಂದೆ ನಡೆಯಬಾರದು. ಸಿಬಂದಿಗಳು ಈ ಬಗ್ಗೆ ಗಮನಕ್ಕೆ ತರಬೇಕು. ಡಯಾಲಿಸೀಸ್ ಸೆಂಟರ್‌ಗೆ ಪ್ರತ್ಯೇಕ ಟ್ಯಾಂಕ್ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆಸ್ಪತೆಯ ಒಳಗೆ ನೀರು ಸೋರುವುದನ್ನು ವೀಕ್ಷಿಸಿದ ಶಾಸಕರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಬಳಿಕ ಆಸ್ಪತ್ರೆಯ ಮೇಲಂತಸ್ತಿಗೆ ಭೇಟಿ ನೀಡಿ ಅಲ್ಲಿ ಶೀಟ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಇಂಜಿನಿಯರ್ ಸುಜಿತ್‌ರವರಿಗೆ ಸೂಚಿಸಿದರು.

ಪರಿಶೀಲನೆ ವೇಳೆ ಉಪಯೋಗವಿಲ್ಲದ ಬೆಡ್‌ಗಳ ರಾಶಿಗಳನ್ನು ನೋಡಿದ ಶಾಸಕರು ಸರಕಾರದ ವಸ್ತುಗಳನ್ನು ದುರುಪಯೋಗ ಮಾಡುವುದು ಸರಿಯಲ್ಲ,ಬೆಡ್‌ಗಳನ್ನು ತಕ್ಷಣ ದುರಸ್ಥಿಪಡಿಸಬೇಕು ಇದಕ್ಕೆ ಬೇಕಾದ ಅನುದಾನವನ್ನು ಶಾಸಕರ ನಿಧಿಯಿಂದ ನೀಡಲಾಗುವುದು. ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಗತ್ಯವಿರುವ ಬೆಡ್‌ಗಳ ಮಾಹಿತಿಯನ್ನು ತಕ್ಷಣ ಪಡೆಯಬೇಕು ಎಂದು ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ತ್ವರಿತ ಸೇವೆಗೆ ನಿರ್ವಹಣಾ ತಂಡ

ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವ ವಿಭಾಗಗಳಲ್ಲಿ ಯಾವ ಸೇವೆ ಇದೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ ಇದರಿಂದ ರೋಗಿಗಳು ಪರದಾಡುವಂತಾಗುತ್ತದೆ. ರೋಗಿಗಳಿಗೆ ತ್ವರಿತ ಸೇವೆ ಸಿಗುವಂತಾಗಲು ಖಾಸಗಿ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ನಿರ್ವಹಣಾ ತಂಡವನ್ನು ಮಾಡಲಾಗುವುದು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರ ಮಂಜೂರಾತಿಯಾಗುವ ಭರವಸೆ ಇದೆ ಎಂದು ಶಾಸಕರು ತಿಳಿಸಿದರು.

ಬಳಿಕ ಮಾಧ್ಯಮದವರೊಡನೆ ಮಾತನಾಡಿ ಸಮುದಾಯ ಆಸ್ಪತ್ರೆಗೆ ಲ್ಯಾಬ್ ಅಗತ್ಯವಿದ್ದು ಇದಕ್ಕೆ ಈಗಾಗಲೇ ೫೦ಲಕ್ಷ ರೂ. ಮಂಜೂರುಗೊಂಡಿದ್ದು ಸುಮಾರು ೩ಸಾವಿರ ವಿಸ್ತೀರ್ಣದಲ್ಲಿ ಲ್ಯಾಬ್ ನಿರ್ಮಾಣಗೊಳ್ಳಲಿದೆ. ಅಲ್ಲದೆ ೨೫ಬೆಡ್‌ನ ಐಸಿಯೂ ಘಟಕವೂ ಬಹುತೇಕ ಅಂತಿಮ ಹಂತದಲ್ಲಿದ್ದು ಶೀಘ್ರವೇ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ನ.ಪಂ.ನ ರೂ. ೨೨ ಲಕ್ಷ ಅನುದಾನ ಮತ್ತು ತಾ.ಪಂ.ನ ರೂ. ೩೬ಲಕ್ಷ ಅನುದಾನ ಮತ್ತು ಶಾಸಕರ ಅನುದಾನದಲ್ಲಿ ಸುಸಜ್ಜಿತ ಮಕ್ಕಳ ವಾರ್ಡ್ ನಿರ್ಮಾಣಗೊಳ್ಳಲಿದೆ. ಸಮುದಾಯ ಆಸ್ಪತ್ರೆಯ ಬಳಿ ಸುಸಜ್ಜಿತ ಶವಾಗಾರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆಸ್ಪತ್ರೆಯ ಆವರಣದೊಳಗೆ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಲಾಗುವುದು. ಈಗಾಗಲೇ ಎರಡು ದಿನದೊಳಗೆ ಸ್ವಚ್ಚತೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶವಾಗಾರದ ಎದುರಿನಲ್ಲಿ ಇಂಟರ್‌ಲಾಕ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪತ್ರಕರ್ತ ತುಕಾರಾಮ್, ಸುಪ್ರೀತ್ ಜೈನ್, ಆಡಳಿತ ವೈದ್ಯಾಧಿಕಾರಿ ಡಾ| ಚಂದ್ರಕಾಂತ್, ಫಾರ್ಮಸಿ ಅಧಿಕಾರಿ ಚಂದ್ರಶೇಖರ್, ಜಿ.ಪಂ ಇಂಜಿನಿಯರ್ ಸುಜೀತ್, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ್, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು