ಬೆಳ್ತಂಗಡಿ: ರೋಟರಿ ಕ್ಲಬ್ ಗವರ್ನರ್ ರೋ. ಪಿ.ಎಚ್.ಎಫ್.ಎ.ಆರ್.ರವೀಂದ್ರ ಭಟ್ ಡಿ. 22 ರಂದು ಬೆಳ್ತಂಗಡಿ ರೋಟರಿ ಕ್ಲಬ್ ಗೆ ಆಗಮಿಸಿ ಕ್ಲಬ್ನ ಸುವರ್ಣ ಮಹೋತ್ಸವವನ್ಬು ಅಧಿಕೃತವಾಗಿ ಸಮಾರೋಪ ಮಾಡಲಿದ್ದಾರೆ ಮತ್ತು ಕ್ಲಬ್ನ ನಾಲ್ಕು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಶರತ್ಕೃಷ್ಣ ಪಡ್ವೆಟ್ನಾಯ ತಿಳಿಸಿದರು.
ಅವರು ಶನಿವಾರ ಇಲ್ಲಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ನಮ್ಮ ರೋಟರಿ ಕ್ಲಬ್ ಬೆಳ್ತಂಗಡಿ ಸದಸ್ಯರ ಆರ್.ಸಿ.ಸಿ. ಇಂಟರಾಕ್ಟ್ , ಆನ್ಸ್ ಕ್ಲಬ್ ಹಾಗೂ ದಾನಿಗಳ ಸಂಪೂರ್ಣ ಸಹಕಾರದೊಂದಿಗೆ ವಿವಿಧ ಸೇವಾಚಟುವಟಿಕೆಗಳಿಗೆ ಪೂರಕವಾದ 8500 ಚದರ ಅಡಿಯ ಒಳಾಂಗಣ ಕ್ರೀಡಾಂಗಣ, ಕೆ.ರಮಾನಂದ ಸಾಲ್ಯಾನ್ ಸ್ಮರಣಾರ್ಥ ಹವಾ ನಿಯಂತ್ರಿತ ಸಭಾಂಗಣದ ನಿರ್ಮಾಣ ಮಾಡಲಾಗಿದೆಯಲ್ಲದೆ, ಕೋವಿಡ್ ಮಧ್ಯೆಯೂ Serve to Change lives ಎಂಬ ಧ್ಯೇಯ ವಾಕ್ಯದಡಿ ಜುಲೈ 2021 ರಿಂದ ಮೊದಲುಗೊಂಡು ಈವರೆಗೆ ಬೆಳ್ತಂಗಡಿ ತಾಲೂಕಿನಾದ್ಯಂತ ಜನ ಸಾಮಾನ್ಯರಿಗೆ ಉಪಯುಕ್ತವಾದ ಸುಮಾರು 500 ಕ್ಕಿಂತಲೂ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸಿ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನವನ್ನು ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಡಿ.22 ರಂದು ಗವರ್ನರ್ ಅವರು, ಬೆಂಗಳೂರಿನ ಇಂದಿರಾ ನಗರ ರೋಟರಿ ಕ್ಲಬ್ನ ಸಹಯೋಗದೊಂದಿಗೆ ಸುಮಾರು ರೂ.6 ಲಕ್ಷ ವೆಚ್ಚದಲ್ಲಿ ಮುಗಳಿಯ ಪ್ರಾ.ಶಾಲೆಯ ಪುನರ್ನಿರ್ಮಾಣಕ್ಕೆ, ಕ್ಲಬ್ವತಿಯಿಂದ ಉಜಿರೆ ಹಿಂದೂ ರುದ್ರಭೂಮಿಗೆ ರೂ. 1.60 ಲಕ್ಷದ ಫ಼್ರೀಜರ್ ಕೊಡುಗೆಗೆ, ಎರಡು ವರ್ಷಗಳ ಹಿಂದೆ ಪ್ರವಾಹದಿಂದ ತೊಂದರೆಗೊಳಗಾಗಿ ಬಳಿಕ ಬದುಕುಕಟ್ಟೋಣ ತಂಡದಿಂದ ಪುನರ್ನಿಮಾಣಗೊಂಡ 12ಮನೆಗಳಿಗೆ ಕ್ಲಬ್ ವತಿಯಿಂದ ಕಲ್ಪಿಸಿರುವ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಲಿದ್ದಾರಲ್ಲದೆ, ಕ್ಲಬ್ ವತಿಯಿಂದ ಕಟ್ಟಿಕೊಟ್ಟ ಸಂಕಷ್ಟದಲ್ಲಿದ್ದ ಮುಂಡಾಜೆ ಗಣಪತಿ ಭಟ್ ಅವರ ಮನೆಗೆ ಭೇಟಿ ನೀಡಲಿದ್ದಾರೆ.
ಸಂಜೆ 7 ಗಂಟೆಗೆ ಅರಳಿಯಲ್ಲಿರುವ ರೋಟರಿ ಸೇವಾ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಸಿಸ್ಟೆಂಟ್ ಗವರ್ನರ್ ರೋ.ಸುರೇಂದ್ರ ಕಿಣಿ, ವಲಯ ಕಾರ್ಯದರ್ಶಿ ರೋ.ಜಯರಾಮ ರೈ ಉಪಸ್ಥಿತರಿರುತ್ತಾರೆ ಎಂದರು.
ಗೋಷ್ಠಿಯಲ್ಲಿ ವಲಯ ಲೆಫ್ಟಿನೆಂಟ್ ರೋ.ಬಿ.ಕೆ.ಧನಂಜಯ ರಾವ್, ಬೆಳ್ತಂಗಡಿ ರೋಟರಿ ಕ್ಲಬ್ನ ಕಾರ್ಯದರ್ಶಿ ರೋ.ಯು.ಎಚ್. ಅಬೂಬಕ್ಕರ್, ಕ್ಲಬ್ನ ನಿಯೋಜಿತ ಅಧ್ಯಕ್ಷೆ ಮನೋರಮಾ ಭಟ್, ನಿಯೋಜಿತ ಕಾರ್ಯದರ್ಶಿ ರಕ್ಷಾ ರಮೇಶ್ ಇದ್ದರು.