ಮಂಗಳೂರು : ನಿರುದ್ಯೋಗ ಸಮಸ್ಯೆ ಸ್ವತಂತ್ರ ಭಾರತ ಎಂದೂ ಕಂಡು ಕೇಳರಿಯದಂತಹ ಭೀಕರ ಸ್ವರೂಪಕ್ಕೆ ಬಂದು ನಿಂತಿದೆ. ಪ್ರತಿ ಮನೆಯಲ್ಲೂ ನಿರುದ್ಯೋಗಿ ಯುವಜನರ ದಂಡೇ ನಿರ್ಮಾಣಗೊಂಡಿದೆ. ವಿದ್ಯಾವಂತ ಯುವಜನರ ಕನಸುಗಳು ಭಗ್ನಗೊಂಡು ಹತಾಶತೆಗೆ ಒಳಗಾಗಿದ್ದಾರೆ. ಯುವಜನರ ಪಾಲಿಗೆ ಕರಾಳವಾಗಿರುವ ಈ ಭೀಕರ ನಿರುದ್ಯೋಗ ಸಮಸ್ಯೆಯ ವಿರುದ್ಧ ನಿರ್ಣಾಯಕ ಆಂದೋಲನವನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ನಿನ್ನೆ(ಡಿ.17) ಬೋಳಾರದ ಎ.ಕೆ.ಜಿ ಭವನದಲ್ಲಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ಆಯೋಜಿಸಿದ ಯುವಜನರ ನಡಿಗೆ ಉದ್ಯೋಗದ ಕಡೆಗೆ ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಲು ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಒತ್ತಾಯಿಸಿ ಕೈಗೊಳ್ಳಲಿರುವ ಯುವಜನರ ಪಾದಯಾತ್ರೆಯ ಸಿದ್ದತೆಗಾಗಿ ಸೇರಿದ ಡಿವೈಎಫ್ಐ ಮಂಗಳೂರು ನಗರದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದ.ಕ ಜಿಲ್ಲೆಯಲ್ಲಿ ಪಿಯುಸಿಗಿಂತ ಮೇಲ್ಗಡೆ ಸರಿ ಸುಮಾರು ಒಂದುವರೆ ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಅತ್ಯಂತ ದುಬಾರಿಯಾಗಿರುವ ಈ ಕಾಲದಲ್ಲಿ ಪ್ರತೀ ವರುಷ ಶಿಕ್ಷಣ ಪಡೆದು ಹೊರಬರುತ್ತಿರುವ ಸುಮಾರು 40 ಸಾವಿರದಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಎಲ್ಲಿವೆ? ಶಾಲಾ ಕಾಲೇಜುಗಳು ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಿ ಬದಲಾಗಿವೆ. ಈಗಾಗಲೇ ಜಿಲ್ಲೆಯಲ್ಲಿ ಸಾವಿರಾರು ಸರಕಾರಿ ಉದ್ಯೋಗಗಳು ಖಾಲಿ ಬಿದ್ದಿವೆ. ಕರಾವಳಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಉದ್ಯೋಗಗಳು ಸೃಷ್ಟಿಯಾಗುವ, ಉದ್ಯೋಗಾಧಾರಿತ ಉದ್ಯಮಗಳು ಸ್ಥಾಪನೆಗೊಳ್ಳುವ, ಇಲ್ಲಿನ ಕೈಗಾರಿಕೆಗಳು ಸೇರಿದಂತೆ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆಯಲ್ಲಿ ದೊಡ್ಡಪಾಲು ಸಿಗುವಂತಹ ನೀತಿಗಳು ಜಾರಿಯಾಗುತ್ತಿಲ್ಲ. ಜಿಲ್ಲೆಯ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಹೊಸ ಉದ್ಯೋಗಗಳನ್ನು ಸೃಷ್ಟಿಮಾಡುವ ಯೋಜನೆಗಳೇ ಸರಕಾರಗಳ ಮುಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯುವಜನತೆ ತಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗಗಳನ್ನು ಪಡೆಯುವ ಅವಕಾಶಗಳೇ ಉಳಿದಿಲ್ಲ. ಉದ್ಯೋಗ ವಂಚಿತ ಯುವಜನರು ಸಮಾಜ ಘಾತುಕ ಚಟುವಟಿಕೆಗಳಿಗೆ, ಮತೀಯ ಸಂಘರ್ಷಗಳಿಗೆ ಬಲಿಯಾಗುತ್ತಿದ್ದಾರೆ. ಒಟ್ಟು ಸಾಮಾಜಿಕವಾಗಿ ಗಂಭೀರ ಬಿಕ್ಕಟ್ಟಿಗೆ ಕಾರಣವಾಗುತ್ತಿರುವ ನಿರುದ್ಯೋಗ ಸಮಸ್ಯೆಯ ವಿರುದ್ಧ ಆಂದೋಲನವನ್ನು ರೂಪಿಸಬೇಕಾಗಿದೆ. ಅಂತಹ ಆಂದೋಲನವನ್ನು ಡಿವೈಎಫ್ಐ ಸಂಘಟನೆ ಮುನ್ನಡೆಸಬೇಕಾಗಿದೆ ಎಂದರು.
ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಉದ್ಯೋಗದ ಪಾದಯಾತ್ರೆ ಹೋರಾಟದ ರೂಪುರೇಷೆಯ ಕುರಿತು ಮಾತನಾಡಿದರು. ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಸಮಾರೋಪ ಭಾಷಣ ಮಾಡಿದರು. ಡಿವೈಎಫ್ಐ ಮಂಗಳೂರು ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿ, ಕಾರ್ಯದರ್ಶಿ ಸಾಧಿಕ್ ಕಣ್ಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.