ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಅಂಜನೊಟ್ಟು ಎಂಬಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಮೂಡುಗರೆ ತಾಲೂಕಿನ ಬಸವರಾಜ್ ಹಾಗೂ ಇತರ ೬ ಮಂದಿಯ ಮೇಲೆ ಬೆಳ್ತಂಗಡಿ ಪೋಲಿಸರು ಪ್ರಕರಣ ದಾಖಲಾಗಿದೆ. ಅದೇ ರೀತಿ ದನ ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿರುವ ಹಿನ್ನಲೆಯಲ್ಲಿ ಅಪರಿಚಿತ ತಂಡದ ಮೇಲೆಯೂ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೂಕ್ತವಾದ ದಾಖಲೆಗಳಿಲ್ಲದೆ ಟಾಟಾ ಎ.ಸಿ ವಾಹನದಲ್ಲಿ ಸುಮಾರು ರೂ.೧೮,೫೦೦ ಮೌಲ್ಯದ ಎರಡು ದನಗಳು ಮತ್ತು ಒಂದು ಕರುವನ್ನು ಮಾಂಸ ಮಾಡಲು ಕಡಿರುದ್ಯಾವರ ಗ್ರಾಮದ ಅಂಜನಬೆಟ್ಟ ಎಂಬಲ್ಲಿ ಸಾಗಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬಸವರಾಜ್, ಅವಿನಾಶ್, ಅಷ್ಪರಾಜ್, ಎಸ್. ಹರೀಶ್, ಬಿ.ಎಸ್.ಹರೀಶ್, ಶೀನ ಪೂಜಾರಿ, ಇಸ್ಮಾಯಿಲ್ ಎಂಬವರ ಮೇಲೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಂದ ಮಾರುತಿ ೮೦೦ ಕಾರು ಹಾಗೂ ದನಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಹಾಗೂ ಎರಡು ದನಗಳನ್ನು ಹಾಗೂ ಒಂದು ಕರುವನ್ನು ವಶಕ್ಕೆ ಪಡೆದುಕೊಂಡಿದ್ದು ಪ್ರಕರಣ ದಾಖಲಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ತಾಲೂಕಿನ ಎಸ್ಗಲ್ ಸುಶಾಂತ್ ನಗರ ನಿವಾಸಿ ಜಿ ಎಸ್ ಹರೀಶ್ ನೀಡಿದ ದೂರಿನಂತೆ ರಾತ್ರಿ ವೇಳೆ ತನ್ನ ಮನೆಗೆ ಹೈನುಗಾರಿಕೆಗೆ ದನಗಳ ಅಗತ್ಯತೆ ಇದ್ದುದರಿಂದ ಶೀನಪ್ಪ ಪೂಜಾರಿ ಎಂಬವರ ಮನೆಯಿಂದ ವ್ಯಾಪಾರ ಮಾಡಿ ೨ ಹಸು ಹಾಗೂ ಒಂದು ಕರುವನ್ನು ತುಂಬಿಸಿಕೊಂಡು ಹೋಗುತ್ತಿದ್ದಾಗ ಕಡಿರುದ್ಯಾವರ ಗ್ರಾಮದ ಅಂಜನಬೆಟ್ಟು ಎಂಬಲ್ಲಿ ೬ ರಿಂದ ೭ ಜನರಿದ್ದ ಅಪರಿಚಿತರು ವಾಹನವನ್ನು ಅಡ್ಡಗಟ್ಟಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಪೋಲಿಸರಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನಲೆಯಲ್ಲಿ ಎರಡು ತಂಡಗಳ ಮೇಲೂ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.