ಬೆಳ್ತಂಗಡಿ: ಅಪೂರ್ವವಾದ ಸಂಸ್ಕಾರ ಕೇಂದ್ರವೊಂದು ಅತಿ ಶೀಘ್ರವಾಗಿ ತಾಲೂಕಿನಲ್ಲಿ ಪ್ರಾರಂಭವಾಗಿರುವುದು ಸಂತಸ ತಂದಿದೆ. ಊರವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಅವರು ಬುಧವಾರ ಸುಲ್ಕೇರಿಯಲ್ಲಿನ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ( ಶ್ರೀರಾಮ ಶಾಲೆ) ವಠಾರದಲ್ಲಿ ನೂತನ ಶ್ರೀರಾಮ ಶಿಶು ಮಂದಿರದ ಕಟ್ಟಡಕ್ಕಾಗಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಒಂದರಿಂದ ಹತ್ತನೇ ತರಗತಿಯವರೆಗಿನ ಈಗಿನ ಶಾಲಾ ಕಟ್ಟಡದ ನಿರ್ಮಾಣಕ್ಕೆ ಬಡಗಿಗಳು, ವರ್ಣಕಾರರು, ಮೇಸ್ತ್ರಿಗಳು, ಕಲ್ಲು ಕೆತ್ತುವವರು, ವಿದ್ಯುತ್ ಕೆಲಸಗಾರರ ಸಹಿತ ಹಲವಾರು ಮಂದಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿರುವುದು, ಹಲವಾರು ಉದ್ಯಮಿಗಳು, ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಹಲವಾರು ಕೊಡುಗೆಗಳನ್ನು ನೀಡಿರುವುದು ತಾಲೂಕಿಗೇ ಮಾದರಿಯಾಗಿದೆ. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಇಂತಹ ಶಾಲೆಗಳು ಅಗತ್ಯವಾಗಿದೆ ಎಂದರು.
ಸಭಾಧ್ಯಕ್ಷತೆಯನ್ನು ಮಾತೃಸಂಸ್ಥೆಯಾಗಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ.ಕೃಷ್ಣಭಟ್ ವಹಿಸಿದ್ದರು. ರಾಜ್ಯ ಕ್ರಷರ್ ಮಾಲಿಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಗುತ್ತಿಗೆದಾರ ವಿನೀತ್ ಜೆ.ಕೋಟ್ಯಾನ್ ಸಾವ್ಯ, ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್, ಸುಲ್ಕೇರಿ ಗ್ರಾ.ಪಂ.ಅಧ್ಯಕ್ಷ ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿದರು. ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ನಾರಾವಿ ಪ್ರಸ್ತಾವಿಸಿದರು. ಉಪಾಧ್ಯಕ್ಷ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು.
ನಾಲ್ಕು ವರ್ಷದ ಹಿಂದೆ 27 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಪ್ರಸ್ತುತ 550 ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಒಂದರಿಂದ ಹತ್ತರವರೆಗಿನ ತರಗತಿಗಳು ಇರುವ ಶ್ರೀರಾಮ ಶಾಲೆಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂದರ್ಭ ಅಂದರೆ 2025ರೊಳಗೆ ಸಕಲ ವ್ಯವಸ್ಥೆಗಳುಳ್ಳ ಶಾಲೆಯನ್ನಾಗಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ – ಗಣೇಶ್ ಹೆಗ್ಡೆ