ಬೆಳ್ತಂಗಡಿ: ಧರ್ಮಕಾರ್ಯ ಹೆಚ್ಚೆಚ್ಚು ನಡೆದಾಗ ಧರ್ಮಕ್ಷೇತ್ರಗಳು ಬೆಳಗುತ್ತದೆ. ಧರ್ಮ ಚಿಂತನೆ ಅಧ್ಯಾತ್ಮ ಚಿಂತನೆ ಬಾರದೇ ಹೋದರೆ ಅಧರ್ಮಕ್ಕೆ ಕಾರಣವಾಗುತ್ತದೆ. ಪರಮಾತ್ಮನನ್ನು ಅನುಕ್ಷಣ ಆರಾಧಿಸಿದಾಗ ಬದುಕಿನ ಆಂತರ್ಯ ಅರಿವಾಗುತ್ತದೆ ಎಂದು ಕನ್ಯಾಡಿ ಶ್ರೀ ರಾಮಕ್ಷೇತ್ರ ಸಂಸ್ಥಾನದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಉಜಿರೆಯ ಪೆರ್ಲದಲ್ಲಿರುವ ಶ್ರೀ ಲಕ್ಷ್ಮೀ ಜನಾರ್ದನ ಸ್ವಾಮಿ ದೇವಸ್ಥಾನದ ಬಾಲಾಲಯ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಾಲಯ ಪ್ರತಿಷ್ಠೆ ಪ್ರಯುಕ್ತ ನಡೆದ ರವಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಅಶೀರ್ವದಿಸಿದರು.
ಶ್ರದ್ಧಾಕೇಂದ್ರ ಹಾಗೂ ವಿದ್ಯಾಕೆಂದ್ರದಿಂದ ಹೆಚ್ಚೆಚ್ಚು ಉದ್ದೀಪನವಾಗಬೇಕು. ಊರಲ್ಲಿ ಧಾರ್ಮಿಕ ಜ್ಞಾನ, ಶೈಕ್ಷಣಿಕ ಪ್ರಭುತ್ವ ಬೆಳೆದಾಗ ಮಕ್ಕಳಿಗೆ ಧರ್ಮದ ಜ್ಞಾನದ ಸಾರ, ಬದುಕಿನ ನೈಜ ಚಿಂತನೆ ಅರಿವಾಗುತ್ತದೆ. ಹೀಗಾಗಿ ಹಳ್ಳಿಯಲ್ಲೂ ಗುರುಕುಲ ಮಾದರಿ ಶಿಕ್ಷಣ ಒದಗಿಸಬೇಕಿದೆ ಎಂದು ಒತ್ತಾಯಿಸಿದರು .
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಸಾನಿಧ್ಯ ಅಭಿವೃದ್ಧಿಯಿಂದ ಊರಿಗೆ ಕ್ಷೇಮವಾಗಿದ್ದು, ಪ್ರತಿನಿತ್ಯ ದೇವರ ಆರಾಧನೆಯಿಂದ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಇಲ್ಲಿನ ದೇವಸ್ಥಾನ ಅಭಿವೃದ್ಧಿಗೆ ಅಗತ್ಯತೆ ಮನಗಂಡು ಸರಕಾರದಿಂದ ಸಿಗುವ ಎಲ್ಲ ಸವಲತ್ತು ಒದಗಿಸಲು ಶಾಸಕನಾಗಿ ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದರು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಪ್ರತಿನಿಧಿ ಶರತ್ ಕೃಷ್ಣ ಪಡ್ವೆಟ್ನಾಯ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ, ಬರೋಡಾ ತುಳು ಕೂಟ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ, ಉದ್ಯಮಿಗಳಾದ ರಾಜೇಶ್ ಶೆಟ್ಟಿ, ಲಕ್ಷ್ಮಣ ಸಫಲ್ಯ, ವಿಶ್ವರತ್ನ ರಾವ್, ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಆಡಳಿತ ಮೊಕ್ತೇಸರ ಕೃಷ್ಣ ಒಪ್ಪಂತ್ತಾಯ, ಶ್ರೀ ಧ.ಮಂ.ಕಾಲೇಜು ಉಪನ್ಯಾಸಕ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.
ಉಜಿರೆ ಗ್ರಾ.ಪಂ. ಉಪಾಧ್ಯಕ್ಷ ರವಿಕುಮಾರ್ ಬರಮೇಲು ಸ್ವಾಗತಿಸಿ ಪ್ರಾಸ್ತಾವಿಸಿದರು. ಗಣೇಶ್ ಡಿ.ಪಿ. ಮುಂಡತ್ತೋಡಿ ವಂದಿಸಿದರು. ವೇದಮೂರ್ತಿ ಶ್ರೀ ನಾಳ ರಾಘವೇಂದ್ರ ಭಟ್ ಅವರ ಮಾರ್ಗದರ್ಶನದಲ್ಲಿ ಕಲಶಾಭಿಷೇಕ, ವಿಷ್ಣುಯಾಗ, ದೈವಪ್ರತಿಷ್ಠೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಕ್ಷೇತ್ರದ ಪ್ರಧಾನ ದೈವಗಳಾದ ಕೊಡಮಣಿತ್ತಾಯ ಹಾಗೂ ಧರ್ಮರಸು ಉಳ್ಳಾಯರಿಗೆ ನರ್ತನ ಸೇವೆ ನಡೆಯಿತು.