ಬೆಳ್ತಂಗಡಿ : ಶಾಸಕರ ಹಾಗೂ ಎಂ ಎಲ್ ಸಿಗಳ ನಿಧಿ ಸೇರಿ ಒಟ್ಟು 32 ಲಕ್ಷ ರೂ. ವೆಚ್ಚದಲ್ಲಿ ಶತಮಾನೋತ್ಸವ ವರ್ಷದಲ್ಲಿರುವ ಮುಂಡಾಜೆ ಉನ್ನತೀಕರಿಸಿದ ಹಿಪ್ರಾಶಾಲೆಗೆ 4 ಕೊಠಡಿ ಹಾಗೂ ವೇದಿಕೆ ರಚನೆಯಾಗಲಿದೆ. ಇದಕ್ಕೆ ಹಿರಿಯ ವಿದ್ಯಾರ್ಥಿಗಳು ಹಾಗೂ ಊರವರು ಹೆಚ್ಚಿನ ಸಹಕಾರ ನೀಡಿದರೆ ಮುಂದಿನ ಎಪ್ರಿಲ್ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಮುಂಡಾಜೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಮಾತನಾಡಿ ಪ್ರಾಥಮಿಕ ಶಾಲೆಗಳಲ್ಲಿ ಸಿಗುವ ಪ್ರೀತಿ,ಸ್ನೇಹ, ವಿಶ್ವಾಸ,ಸಂಸ್ಕಾರಗಳು ಜೀವನವನ್ನು ರೂಪಿಸುವಲ್ಲಿ ಮುಖ್ಯವಾಗಿರುತ್ತದೆ. ಭವಿಷ್ಯದ ದೃಷ್ಟಿಯಿಂದ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವ ಕೆಲಸಗಳು ಯಶಸ್ವಿಯಾಗುತ್ತವೆ ಎಂದು ಹೇಳಿದರು.
ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣರಾವ್ ಅಡೂರು ಅಧ್ಯಕ್ಷತೆ ವಹಿಸಿದ್ದರು.ಮುಂಡಾಜೆ ಗ್ರಾಪಂ ಅಧ್ಯಕ್ಷೆ ರಂಜಿನಿ ರವಿ,ಪಿಡಿಒ ಸುಮಾ ಎ.ಎಸ್, ಸದಸ್ಯರು,ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಮಣ್ಣ ಶೆಟ್ಟಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಬಂಗೇರ,ಸನ್ಯಾಸಿಕಟ್ಟೆ ದೇವಸ್ಥಾನದ ಆಡಳಿತ ಮೊಕ್ತೇಸರ ಕಜೆ ವೆಂಕಟೇಶ್ವರ ಭಟ್, ಎಸ್.ಟಿ.ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸುಮಜಲು,ಧರ್ಮ ಸ್ಥಳ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸರಾವ್, ಜಿಪಂ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ಪ್ರಮುಖರಾದ ವಿಶ್ವನಾಥ ಶೆಟ್ಟಿ,ಬಾಬು ಪೂಜಾರಿ,ಸಚಿನ್ ಭಿಡೆ, ಸುರೇಶ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.
ಸಮಿತಿಯ ಗೌರವಾಧ್ಯಕ್ಷ ಅಡೂರು ವೆಂಕಟ್ರಾಯ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸೇವಂತಿ ಕಾರ್ಯಕ್ರಮ ನಿರೂಪಿಸಿದರು.
ಆನೆ ಕಂದಕ ತೆರೆಯಲು ಕ್ರಮ
ಮುಂಡಾಜೆ ಪರಿಸರದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ.ಪಕ್ಕದ ಚಿಬಿದ್ರೆ ಗ್ರಾಮದ ನಳೀಲು ಬಳಿ 2019ರ ಪ್ರವಾಹ ಸಮಯದಲ್ಲಿ ಆನೆ ಕಂದಕ ಮುಚ್ಚಿಹೋಗಿರುವುದರಿಂದ ಕಾಡಾನೆಗಳು ಸರಾಗವಾಗಿ ಮುಂಡಾಜೆಗೆ ಬರುತ್ತಿವೆ.ಈ ಬಗ್ಗೆ ಸ್ಥಳೀಯರ ಜತೆ ಮಾತುಕತೆ ನಡೆಸಿದ ಶಾಸಕರು ಮುಚ್ಚಿಹೋಗಿರುವ 30ಮೀ. ಉದ್ದದ ಆನೆ ಕಂದಕವನ್ನು ಮುಂದಿನ ಒಂದೆರಡು ದಿನಗಳಲ್ಲಿ ಮರು ನಿರ್ಮಿಸಲಾಗುವುದು ಎಂದು ಹೇಳಿದರು.